ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಕೆರೆ ತಾಂಡಾದಲ್ಲಿ ಭಾನುವಾರ ರಾತ್ರಿ ಸರಣಿ ಮನೆಗಳವು ನಡೆದಿದೆ. ಎಂಟು ಮನೆಗಳಿಗೆ ಕನ್ನ ಹಾಕಿರುವ ಕಳ್ಳರು ₹3 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ.
‘ಕಮಲಾಪುರದ ಕೆರೆ ತಾಂಡಾದ ನಿವಾಸಿಗಳಾದ ಚಂದ್ರ ನಾಯ್ಕ, ಹನುಮ ನಾಯ್ಕ, ಲೋಕಾ ನಾಯ್ಕ, ಪಂಪಾ ನಾಯ್ಕ, ಸಣ್ಣ ನಾಯ್ಕ ಸೇರಿದಂತೆ ಎಂಟು ಜನರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮನೆಯ ಮಾಲೀಕರು ಮನೆಗೆ ಬೀಗ ಹಾಕಿ ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಕಬ್ಬು ಕಟಾವಿಗೆ ತೆರಳಿದ್ದಾರೆ. ಈ ವಿಷಯ ಅರಿತು ಕಳ್ಳರು ಮನೆಗೆ ಹೊಕ್ಕಿ, ಅಲ್ಲಿದ್ದ ಅಲ್ಮೇರಾ, ಟ್ರಂಕ್ ಒಡೆದು ಅದರಲ್ಲಿದ್ದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ’ ಎಂದು ಕಮಲಾಪುರ ಠಾಣೆ ಪಿಎಸ್ಐ ಅರುಣ್ ರಾಥೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೆರೆ ತಾಂಡಾದ ನಿವಾಸಿ ಕರ್ಯಾ ನಾಯ್ಕ ಎಂಬುವರಿಗೆ ಸೇರಿದ ಮೂರು ಟಗರುಗಳ ಕಳ್ಳತನವಾಗಿತ್ತು. ಅದರ ಬೆನ್ನಲ್ಲೇ ಸರಣಿ ಮನೆಗಳವು ನಡೆದಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಹಳೆ ಮಲಪನಗುಡಿಯಲ್ಲಿ ಕಳ್ಳರು ಮನೆಗಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.