
ಆರೋಪಿ ಸೆಲ್ವಕುಮಾರ್
ಹೊಸಪೇಟೆ (ವಿಜಯನಗರ): ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್ ಗುಂಡ್ಲಕೇರಿ ಟಿ.ಬಿ.ಬೋರ್ಡ್ ಕ್ವಾರ್ಟರ್ಸ್ನಲ್ಲಿ ಬುಧವಾರ ನಡೆದಿದೆ.
ಹೊಸಪೇಟೆ ಟಿ.ಬಿ. ಡ್ಯಾಂನ ವಂಕಯ್ಯ ಕ್ಯಾಂಪ್ ನಿವಾಸಿ ಝಾನ್ಸಿ (36) ಮೃತರು. ಆಕೆಯ ಪತಿ, ವೆಲ್ಡಿಂಗ್ ಕೆಲಸ ಮಾಡುವ ಸೆಲ್ವಕುಮಾರ್ (40) ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದ್ದಾರೆ.
ಝಾನ್ಸಿ ಮತ್ತು ಸೆಲ್ವಕುಮಾರ್ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಏಳು ವರ್ಷ ಚೆನ್ನಾಗಿಯೇ ಇದ್ದರು. ಝಾನ್ಸಿ ಶೀಲದ ಬಗ್ಗೆ ಪತಿ ಬಳಿಕ ಅನುಮಾನ ಶುರುವಿಟ್ಟುಕೊಂಡು ಜಗಳ ಮಾಡತೊಡಗಿದ್ದ. ಮೂರು ತಿಂಗಳ ಹಿಂದೆ ಹೀಗೆ ಜಗಳ ಆದಾಗ ಮನನೊಂದ ಆಕೆ ವೆಂಕಟಾಪುರದ ತನ್ನ ಚಿಕ್ಕಪ್ಪನ ಮನೆಗೆ ಬಂದು ಅಲ್ಲೇ ಇದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳವಾರ ರಾತ್ರಿ ಅಲ್ಲಿಗೆ ಬಂದಿದ್ದ ಸೆಲ್ವಕುಮಾರ ಪತ್ನಿಯ ಜತೆಗೆ ಜಗಳ ಮಾಡಿದ್ದ. ಬುಧವಾರ ಬೆಳಿಗ್ಗೆ ಮತ್ತೆ ಬಂದು ಮನೆಗೆ ಬರುವಂತೆ ಹೇಳಿದಾಗ, ಹಿರಿಯರು ಹೇಳಿದರೆ ಎರಡು ದಿನದಲ್ಲಿ ಬರುವುದಾಗಿ ಝಾನ್ಸಿ ಉತ್ತರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಸೆಲ್ವಕುಮಾರ, ಪಕ್ಕದಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಪತ್ನಿಯ ಕುತ್ತಿಗೆಯನ್ನು ಕೊಚ್ಚಿದ. ಆಗ ಝಾನ್ಸಿಯ ಚಿಕ್ಕಮ್ಮ ಮತ್ತು ಅವರ ಮಗಳು ಹತ್ತಿರ ಬಂದಾಗ ಅವರನ್ನೂ ಕೊಲ್ಲುವ ಬೆದರಿಕೆ ಒಡ್ಡಿದ, ಹೀಗಾಗಿ ಅವರು ತಪ್ಪಿಸಿಕೊಂಡು ಹೋದರು. 3–4 ಬಾರಿ ಮಚ್ಚಿನೇಟು ಬಿದ್ದ ಕಾರಣ ಝಾನ್ಸಿ ಸ್ಥಳದಲ್ಲೇ ಮೃತಪಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಟಿ.ಮಂಜುನಾಥ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.