ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯಲ್ಲಿ ಗುರುವಾರ ನೀರಿನ ಹರಿವು ಸ್ವಲ್ಪ ಪ್ರಮಾಣದಲ್ಲಿ ಇಳಿಮುಖಗೊಂಡಿದೆ.
105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ಈಗಾಗಲೇ ಸಂಪೂರ್ಣ ತುಂಬಿದೆ. ಅಣೆಕಟ್ಟೆಗೆ 1.62 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಬುಧವಾರ 1.92 ಲಕ್ಷ ಕ್ಯುಸೆಕ್ ಒಳಹರಿವು ಇತ್ತು. ನದಿಗೆ 1.63 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಬುಧವಾರ 1.80 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿತ್ತು.
ಮಲೆನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿರುವುದರಿಂದ ಜಲಾಶಯದ ಮೇಲ್ಭಾಗದ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ತಾಲ್ಲೂಕಿನಲ್ಲಿ ಜಲಾವೃತವಾಗಿದ್ದ ನೂರಾರು ಎಕರೆ ಗದ್ದೆಗಳಿಂದ ನೀರು ಹೊರ ಹೋಗಿದೆ. ಆದರೆ, ಅಧಿಕ ತೇವಾಂಶದಿಂದ ಕೊಳೆರೋಗದ ಆತಂಕ ಎದುರಾಗಿದೆ.
ತಾಲ್ಲೂಕಿನ ಹಂಪಿ, ತಳವಾರಘಟ್ಟದಲ್ಲಿ ಬಾಳೆ, ಭತ್ತದ ಗದ್ದೆಗಳಿಗೆ ನುಗ್ಗಿದ ನೀರು ನಿಧಾನಕ್ಕೆ ಹೊರ ಹೋಗುತ್ತಿದೆ. ಆದರೆ, ಈಗಲೂ ಹಂಪಿ ಪುರಂದರದಾಸರ ಮಂಟಪ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ಕರ್ಮ ಮಂಟಪ, ಸ್ನಾನಘಟ್ಟ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕಗಳು ಮುಳುಗಿದ ಸ್ಥಿತಿಯಲ್ಲೇ ಇವೆ. ಗುರುವಾರವೂ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯ ಸುಳಿವು ಇರಲಿಲ್ಲ. ಬೆಳಿಗ್ಗೆಯಿಂದ ಕಾರ್ಮೋಡ ಇತ್ತು. ಆಗಾಗ ನಗರದಲ್ಲಿ ತುಂತುರು ಮಳೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.