ADVERTISEMENT

ಆಲಮಟ್ಟಿ ಸುತ್ತಮುತ್ತ ಭಾರಿ ಮಳೆ : ಪುನರ್ವಸತಿ ಕೇಂದ್ರದ ಮನೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:40 IST
Last Updated 2 ಅಕ್ಟೋಬರ್ 2012, 4:40 IST

ಆಲಮಟ್ಟಿ: ನಿಡಗುಂದಿ ಪಟ್ಟಣದಲ್ಲಿ ಭಾನುವಾರ ತಡ ರಾತ್ರಿ ಸುರಿದ ಮಳೆಯಿಂದ ಪಟ್ಟಣದ ಕಮದಾಳ, ಮಣಗೂರ ಸೇರಿದಂತೆ ಪುನರ್ವಸತಿ ಕೇಂದ್ರದಲ್ಲಿನ ಯೋಜನಾ ನಿರಾಶ್ರಿತರ ಮನೆಗಳಲ್ಲಿ ಮಳೆ ನೀರು ಹೊಕ್ಕು ಮನೆಗಳೆಲ್ಲ ಜಲಾವೃತಗೊಂಡಿವೆ.

ಇಡೀ ರಾತ್ರಿ ಮಳೆಯ ನೀರು ಹೊರಹಾಕಿ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ರಾತ್ರಿಯೆಲ್ಲ ಜಾಗರಣೆ ಮಾಡು ವಂತಾಯಿತು.

ಮಳೆಯ ನೀರು ಹೊಕ್ಕಿದ್ದರ ಪರಿಣಾಮ ಮನೆಯಲ್ಲಿ ಸಂಗ್ರಹಿಸಿಡ ಲಾಗಿದ್ದ ಧವಸ ಧಾನ್ಯ, ಇತರ ಕಾಳುಕಡಿಗಳೆಲ್ಲ ಮಳೆಯ ನೀರಿನಿಂದ ನಾಶವಾಗಿವೆ.

ಚರಂಡಿಯಿಲ್ಲದೆ ಅವಘಡ: ಕೂಲಿ ನಾಲಿ ಮಾಡುವ, ಬುಟ್ಟಿ ತಯಾರಿಸುವ ಪರಸಪ್ಪ ಯಂಕಪ್ಪ ಬಜಂತ್ರಿ, ನೀಲ ಕಂಠಪ್ಪ ಬಜಂತ್ರಿ ಹಾಗೂ ಕಾರ್ಮಿಕ ನಾಗಿರುವ ಮುತ್ತುಸ್ವಾಮಿ ಕಂಬಿಮಠ , ಮೀನಾಕ್ಷಿ ಮಾದರ ಮೊದಲಾದ ಯೋಜನಾ ನಿರಾಶ್ರಿತರ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮನೆಯ ಮುಂದೆ ಇರುವ ಚರಂಡಿ ಯನ್ನು ಸರಿಯಾಗಿ ನಿರ್ಮಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎನ್ನುತ್ತಾರೆ ಈ ಯೋಜನಾ ನಿರಾಶ್ರಿತರು.

ಆಲಮಟ್ಟಿ ಸುತ್ತಮುತ್ತ ಗ್ರಾಮಗಳಲ್ಲಿ ಭಾನುವಾರ ಸಂಜೆ ಯಿಂದಲೂ ಪ್ರಾರಂಭಗೊಂಡ ಮಳೆ ಸೋಮವಾರ ಸಂಜೆಯವರೆಗೂ ಮುಂದುವರೆದಿತ್ತು. ಇದರಿಂದ ರೈತರಲ್ಲಿ ಹರ್ಷ ಮೂಡಿದರೂ, ಹಲವೆಡೆ ಭಾರಿ ಮಳೆಯಿಂದ ಹೊಲದ ಒಡ್ಡುಗಳು ಒಡೆದ ಘಟನೆಗಳು ನಡೆದಿವೆ. ಆಲಮಟ್ಟಿ, ವಂದಾಲ, ಬೇನಾಳ, ಅರಳದಿನ್ನಿ, ಚಿಮ್ಮಲಗಿ ಸೇರಿದಂತೆ ನಾನಾ ಕಡೆ ಜಿಟಿ ಜಿಟಿಯಾಗಿ ಐದಾರು ಗಂಟೆಗಳ ಕಾಲ ನಿರಂತರ ಮಳೆ ಸುರಿದಿದೆ.

ಈ ಭಾಗದಲ್ಲಿ ತಡವಾಗಿ ಬಿತ್ತನೆ ಮಾಡಿದ ಸೂರ್ಯಕಾಂತಿ, ತೊಗರಿ ಬೆಳೆಗೆ ಈ ಮಳೆ ಅನುಕೂಲವಾಗಿದ್ದು, ವಿದ್ಯುತ್‌ನ ಅನಾನೂಕೂಲತೆಯಿಂದ ನಿಂತಿದ್ದ ನೀರು ಹರಿಸುವ ಪ್ರಕ್ರಿಯೆ ಇದರಿಂದ ಸುಗಮವಾಗಿದೆ.

ಮಳೆ ವಿವರ:  ಭಾನುವಾರದಿಂದ ಸೋಮವಾರ ಬೆಳಿಗ್ಗೆ ವರೆಗೆ ಆಲಮಟ್ಟಿ ಯಲ್ಲಿ 59 ಮಿ.ಮೀ, ಆರೇಶಂಕರದಲ್ಲಿ 51.2 ಮಿ.ಮೀ, ಮಟ್ಟಿಹಾಳದಲ್ಲಿ 17.4 ಮಿ. ಮೀ ಮಳೆಯಾಗಿದೆ. ಆದರೇ ಕಳೆದ ಐದಾರು ದಿನಗಳಿಂದ ಆಲಮಟ್ಟಿ ಜಲಾಶಯಕ್ಕೆ ಒಳಬರುವ ನೀರಿನಲ್ಲಿ ಕುಸಿತಗೊಂಡಿದೆ.

519.6 ಮೀ ಗರಿಷ್ಠ ಎತ್ತರದ ಜಲಾ ಶಯದಲ್ಲಿ ಸೋಮವಾರ 519.35 ಮೀವರೆಗೆ ನೀರು ಸಂಗ್ರಹಗೊಂಡಿದೆ. ಜಲಾಶಯದಲ್ಲಿ 118 ಟಿ.ಎಂ.ಸಿ.  ನೀರು ಸಂಗ್ರಹಗೊಂಡಿದ್ದು, 7105 ಕ್ಯೂಸೆಕ್ ನೀರು ಹೊರಹೋಗುತ್ತಿದೆ. 

ಬಸವನಬಾಗೇವಾಡಿ ವರದಿ

ಬಸವನಬಾಗೇವಾಡಿ:  ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಮಳೆ ಯಾಗಿದೆ.
 ಸೋಮವಾರ ಬೆಳಿಗ್ಗೆ ಮೊಡ ಮುಸುಕಿದ ವಾತಾವರಣ ಬಹುತೇಕ ಭಾಗದಲ್ಲಿ ಕಂಡುಬಂದಿತು.  ಮಧ್ಯಾಹ್ನ ಪಟ್ಟಣದಲ್ಲಿ ಕೆಲ ಹೊತ್ತು ರಭಸದ ಮಳೆಯಾಗಿದೆ. 

ಕಳೆದ ಕೆಲ ದಿನಗಳಿಂದ ಮಳೆ ಆರಂಭವಾಗಿದ್ದರಿಂದ  ಅಲ್ಲಲ್ಲಿ ಕೆಲ ಕೆರಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಹಳ್ಳಗಳಲ್ಲಿ ಅಲ್ಪ ಪ್ರಮಾಣದ ನೀರು ಹರಿಯುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.