ADVERTISEMENT

ಕಾಲುವೆ ಆಧುನೀಕರಣಕ್ಕೆ 2416 ಕೋಟಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 6:05 IST
Last Updated 4 ಆಗಸ್ಟ್ 2012, 6:05 IST

ಆಲಮಟ್ಟಿ: ನಾರಾಯಣಪುರ ಎಡದಂಡೆ ಕಾಲುವೆಯ ಜಾಲದ ವಿವಿಧ ಕಾಲುವೆಗಳ ಆಧುನೀಕರಣಕ್ಕೆ ಕೇಂದ್ರ ಸರಕಾರದ ಅನುದಾನದಡಿ ರೂ 2416 ಕೋಟಿ ವೆಚ್ಚದ ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ದೊರಕಿದೆ ಎಂದು ಕೆಬಿಜೆಎನ್‌ಎಲ್ ಎಮ್‌ಡಿ ಕಪಿಲ ಮೋಹನ ತಿಳಿಸಿದರು.

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನಾರಾಯಣಪೂರ ಎಡದಂಡೆ ಕಾಲುವೆ ಜಾಲದ ನೀರಿನ ಬಳಕೆಯ ದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜಲ ಉದ್ಧಿಷ್ಟ ಯೋಜನೆ ಅಡಿ ಇದರ ಮಂಜೂರಾತಿಯಾಗಿದೆ ಎಂದರು.

ಇದರಿಂದಾಗಿ ಸುಮಾರು 30 ವರ್ಷಗಳ ಹಿಂದಿನ ಈ ಕಾಲುವೆ ಸಂಪೂರ್ಣ ಆಧುನಿಕರಣಗೊಳ್ಳಲಿದೆ ಎಂದರು.
ನಾರಾಯಣಪುರ ಎಡದಂಡೆ ಕಾಲುವೆಯು ನಾರಾಯಣಪುರ ಅಣೆಕಟ್ಟಿಎಯ ಎಡಭಾಗದಿಂದ ಪ್ರಾರಂಭಗೊಂಡಿದ್ದು, ಸದರಿ ಕಾಲುವೆಯು 4.50 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರು ಒದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ ಜೀವನಾಡಿ ಕಾಲುವೆಯಾಗಿದೆ ಎಂದರು.

ಈ ಯೋಜನೆಯಡಿ ನಾರಾಯಣಪುರ ಎಡದಂಡೆ ಕಾಲುವೆ ಮತ್ತು ವಿತರಣಾ ಕಾಲುವೆ ಜಾಲಕ್ಕೆ 820 ಕೋಟಿ, ಶಹಾಪುರ ಶಾಖಾ ಕಾಲುವೆಗೆ 225 ಕೋಟಿರೂ, ಜೇವರ್ಗಿ ಶಾಖಾ ಕಾಲುವೆಗೆ 57.80 ಕೋಟಿ ರೂ, ಇಂಡಿ ಶಾಖಾ ಕಾಲುವೆಗೆ 75 ಕೋಟಿ, ಮುಡಬಾಳ ಶಾಖಾ ಕಾಲುವೆಗೆ 70 ಕೋಟಿ ರೂ ವೆಚ್ಚದಲ್ಲಿ ಅಧುನೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ.

ಅಲ್ಲದೇ ನೀರಿನ ಬಳಕೆಯ ಪ್ರಮಾಣ ಅಳೆಯಲು ಟೆಲಿಮೆಟ್ರಿ ತಂತ್ರಜ್ಞಾನ ವ್ಯವಸ್ಥೆ ಅಳವಡಿಕೆಗಾಗಿ 17.50 ಕೋಟಿ ರೂ, ನೀರಿನ ಸಮರ್ಪಕ ವಿತರಣೆಗಾಗಿ ಸ್ವಯಂಚಾಲಿತ ಗೇಟುಗಳ ಅಳವಡಿಕೆಗಾಗಿ 30 ಕೋಟಿ ರೂ, ಹನಿ ನೀರಾವರಿ ಪದ್ಧತಿ ಅಳವಡಿಕೆಗಾಗಿ 1020 ಕೋಟಿ ರೂ, ಸವುಳು-ಜವುಳು ಬಾಧಿತ ಅಚ್ಚುಕಟ್ಟು ಕ್ಷೇತ್ರದ ಸುಧಾರಣೆಗೆ ಸಬ್‌ಸರಫೇಸ್ ಡ್ರೈನೇಜ್ ನಿರ್ಮಾಣಕ್ಕೆ 57 ಕೋಟಿ ರೂ, ಜಿ.ಐ.ಎಸ್. ತಂತ್ರಜ್ಞಾನ ಅಳವಡಿಕೆಗೆ 5 ಕೋಟಿ ರೂ, ನೀರು ಬಳಕೆದಾರರ ಸಂಘಗಳ ಸ್ಥಾಪನೆ, ನಿರ್ವಹಣೆಗಾಗಿ 38 ಕೋಟಿ ರೂ ಸೇರಿದಂತೆ ಒಟ್ಟಾರೇ 2416 ಕೋಟಿ ರೂಗಳಯೋಜನೆಗೆ ಅನುಮತಿ ದೊರಕಿದೆ ಎಂದರು.

ಈ ಯೋಜನಾ ವರದಿಯನ್ನು ಭಾರತ ಸರಕಾರ ಜಲಸಂಪನ್ಮೂಲ ಇಲಾಖೆ ಒಪ್ಪಿಕೊಂಡಿದ್ದು, ಇದನ್ನು ರಾಷ್ಟ್ರೀಯ ಜಲ ಉದ್ಧಿಷ್ಟ ಕಾರ್ಯ ಯೋಜನೆಯಡಿ ಪರಿಗಣಿಸಿ ವಿವರವಾದ ಯೋಜನಾ ವರದಿ ತಯಾರಿಸಲು ಸೂಚಿಸಿದೆ ಎಂದರು. ಈ ಯೋಜನೆಗೆ ಕೇಂದ್ರ ಸರಕಾರದ ಧನ ಸಹಾಯ ದೊರಕಲಿದ್ದು, ರಾಷ್ಟ್ರೀಯ ಪೈಲೆಟ್ ಯೋಜನೆಯಾಗಿದೆ. ಇದು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಮೋಹನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.