ವಿಜಯಪುರ: ಶನಿವಾರ ಬಿಸಿದ ಬಿರುಗಾಳಿಗೆ ತಾಲ್ಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಎರಡು ಫಾಲಿಹೌಸ್ಗಳ ಹಾಳೆ ಹರಿದ ಪರಿಣಾಮ ಡಬ್ಬು ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.
ಹೊನಗನಹಳ್ಳಿಯ ಸಿದ್ದನಗೌಡ ಬಗಲಿ, ಮಹಾದೇವಿ ಬಿದರಿ ಎಂಬುವರಿಗೆ ಸೇರಿದ ಫಾಲಿಹೌಸ್ಗಳು, ಎರಡ್ಮೂರು ತಿಂಗಳ ಹಿಂದೆ ತೋಟಗಾರಿಕಾ ಇಲಾಖೆ ಸಹಾಯದೊಂದಿಗೆ ಸುಮಾರು ₹22 ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಿಕೊಂಡಿದ್ದರು. ನಂತರ ಡಬ್ಬು ನಾಟಿ ಮಾಡಿ ಉತ್ತಮವಾಗಿ ಬೆಳೆಸಿದ್ದರು. ಮಾರಾಟ ನಡೆಸುತ್ತಿದ್ದು, ನಾಲ್ಕೈದು ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದರು. ಶನಿವಾರ ಬಿಸಿದ ಬಿರುಗಾಳಿಗೆ ಹಾಳೆ ಹರಿದ ಪರಿಣಾಮ ಬೆಳೆ ಹಾಳಾಗುವ ಭಯದಲ್ಲಿದ್ದಾರೆ.
‘ನೀರಿನ ಸಮಸ್ಯೆ ಆಗಿ ಇದ್ದ ದ್ರಾಕ್ಷಿ ಬೆಳಿ ತಗುದು ಫಾಲಿಹೌಸ್ ಮಾಡಕೊಂಡು ಜನೇವರಿ ತಿಂಗಳಲ್ಲಿ ಬೆಳಗಾವಿಯಿಂದ ಐದು ಸಾವಿರ ಡಬ್ಬು ಮೆಣಸಿನಕಾಯಿ ಸಸಿ ತಂದು ಹಚ್ಚಿದ್ದೆ. ಬೆಳೆ ಕೂಡ ಚೆನ್ನಾಗಿ ಬಂದಿತ್ತು.
ವಾರಕ್ಕೆ ಹತ್ತರಿಂದ 12 ಸಾವಿರ ಆದಾಯ ಬರ್ತಿತೆ. ಆದರೆ, ಬಿರುಗಾಳಿಗೆ ಫಾಲಹೌಸ್ ಮೇಲೆ ಹಾಕಿದ ಹಾಳೆ ಹರಿದಿದ್ದರಿಂದ ಬೆಳೆ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಹಾಳೆಬಾಳ ತುಟ್ಟಿ ಐತಿ. ಏನ್ ಮಾಡಬೇಕು ಅನ್ನುದೇ ದೋಚುತ್ತಿಲ್ಲ’ ಎಂದು ರೈತ ಸಿದ್ದನಗೌಡ ಬಗಲಿ ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.