ADVERTISEMENT

ವೃತ್ತಿ ಶಿಕ್ಷಣ ಪ್ರವೇಶ ಕಾಯ್ದೆ ಅನುಷ್ಠಾನಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 5:42 IST
Last Updated 19 ಡಿಸೆಂಬರ್ 2013, 5:42 IST

ಇಂಡಿ: ಬಡ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಮಾರಕವಾಗಲಿರುವ ವೃತ್ತಿ ಶಿಕ್ಷಣ 2006ರ ಕಾಯ್ದೆ ಅನುಷ್ಠಾನ ಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿದ ಎಬಿವಿಪಿಯ ನೂರಾರು ಜನ ವಿದ್ಯಾರ್ಥಿಗಳು ಬುಧವಾರ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದರು.

ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗುವ 2006ರ ಕಾಯ್ದೆ ಯನ್ನು ಜಾರಿಗೊಳಿಸಬಾರದು.

ಈ ಕಾಯ್ದೆ ಜಾರಿಯಾದರೆ ಪ್ರಸ್ತುತ ಸರ್ಕಾರಿ ಕೋಟಾದಲ್ಲಿರುವ ಎಂಜಿನಿಯ ರಿಂಗ್‌ದ ಶೇ.45, ವೈದ್ಯಕೀಯದ ಶೇ.40, ದಂತ ವೈದ್ಯಕೀಯದ     ಶೇ.35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರಿ ಸೀಟುಗಳು ಇಲ್ಲದಂತಾಗುತ್ತದೆ. ಕಾಮೆಡ್‌–ಕೆ. ನಡೆಸುವ ಪರೀಕ್ಷೆಗಳ ಬಗ್ಗೆ ಈಗಾಗಲೇ ಹಲವಾರು ದೂರುಗಳಿವೆ.

ಅಂತಹದ ರಲ್ಲಿ ಸರಕಾರ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೇಡ್‌–ಕೆ ಇವರಿಗೆ ಬಿಟ್ಟುಕೊಡುತ್ತಿರುವುದು ಖಂಡನೀಯ ಎಂದು ಹೇಳಿದ ಎಬಿವಿಪಿ ಇದನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿದೆ. ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ಕಾರ್ಯದರ್ಶಿ ಶ್ರೀಧರ ಕ್ಷತ್ರಿ, ನಾಗೇಶ ಶಿಂಧೆ, ಶಂಕರ ಹಲವಾಯಿ, ಪ್ರಮೋದ ವಾಘ್ಮೋರೆ, ನಾವಿಜ್‌ ಉಸ್ತಾದ, ರಾಘು ಧನಶೆಟ್ಟಿ, ಹುಸೇನಿ ಬೇಪಾರಿ, ಗೌರೀಶ ಪಾಟೀಲ, ರಾಜಗುರು ದೇವರ, ಸುನೀಲ   ಕವಲಗಿ, ಸಚಿನ ಹದಗಲ, ಚನ್ನು ಹಿರೇಮಠ ಮುಂತಾದವರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.