ADVERTISEMENT

ಸಂಶೋಧನೆ ಸಮಾಜಮುಖಿಯಾಗಲಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 3:30 IST
Last Updated 20 ಅಕ್ಟೋಬರ್ 2012, 3:30 IST

ವಿಜಾಪುರ: `ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿವಿಧ ವಿಷಯಗಳ ಮೇಲಿನ ಸಂಶೋಧನೆಗಾಗಿ ದೇಶದ ಐ.ಐ.ಟಿ., ಐ.ಐ.ಎಂ. ನಂತಹ ಸ್ವಾಯತ್ತ ಸಂಸ್ಥೆಗಳು ಹಾಗೂ ಹಲವು ವಿಶ್ವವಿದ್ಯಾಲಯಗಳಿಗೆ   ನೂರಾರು ಕೋಟಿ ಅನುದಾನ ನೀಡಲಾಗುತ್ತಿದೆ.

ಈ ಅನುದಾನ ಬಳಸಿಕೊಂಡು ಇದುವರೆಗೆ ಸಮಾಜಕ್ಕೆ ಉಪಯೋಗವಾಗಿರುವ ಎಷ್ಟು ಸಂಶೋಧನೆಗಳು ನಡೆದಿವೆ ಎನ್ನುವುದನ್ನು ಪ್ರಶ್ನಿಸಬೇಕಿದೆ~ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಆರ್. ಅನಂತನ್ ಹೇಳಿದರು.

ಇಲ್ಲಿಯ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಕಾಲೇಜಿ ನಲ್ಲಿ ಜಿಲ್ಲಾ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ ಲೆಕ್ಕಶಾಸ್ತ್ರ ವಿಷಯದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಹಾಗೂ ಸಂಶೋಧನಾ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

`ಇತ್ತೀಚಿನ ಸಂಶೋಧನೆಗಳು ಕೇವಲ ಅನುಕರಣೆ ಮತ್ತು ಪುನರಾವರ್ತನೆ ಯಾಗುತ್ತಿದ್ದು, ಇದನ್ನು ತಡೆಯಬೇಕಿದೆ. ದೇಶದ ಕೆಲವು  ವಿಶ್ವವಿದ್ಯಾಲಯಗಳು ಇಂಥ ದಂಧೆಯಲ್ಲಿ ತೊಡಗಿವೆ~ ಎಂದರು.
ನಾವು ವಾಣಿಜ್ಯ ಕಾಲೇಜಿನಲ್ಲಿ ನೀಡುತ್ತಿರುವ ಶಿಕ್ಷಣಕ್ಕೂ ಹೊರಗಡೆ ವೃತ್ತಿಪರರು ಅನುಸರಿಸುತ್ತಿರುವ ಕ್ರಮಕ್ಕೂ ಬಹಳಷ್ಟು ಅಂತರವಿದೆ. ನಮ್ಮ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳ ಬೇಕಿದೆ ಎಂದು ಪ್ರತಿಪಾದಿಸಿದರು.

ಹಿರಿಯ ಲೆಕ್ಕಪರಿಶೋಧಕ ರಾಜೀವ್ ನಾಯಕ ಮಾತನಾಡಿ, ಜಾಗತಿಕವಾಗಿ ಲೆಕ್ಕಪರಿಶೋಧನೆಗೆ ಅತ್ಯಂತ ಬಿಗಿ ಕ್ರಮ ಅನುಸರಿಸಲಾಗುತ್ತದೆ. ಆದರೂ ಅಮೆರಿಕೆಯ ಎನ್ರಾನ್ ಕಂಪೆನಿಯನ್ನು ಜಗತ್ತಿನ ಬಹುದೊಡ್ಡ ಲೆಕ್ಕಪರಿಶೋಧಕ ಸಂಸ್ಥೆ ಆಡಿಟ್ ಮಾಡಿದ್ದರೂ ಸಹ ಆರ್ಥಿಕ ಹಗರಣ ಬಯಲಿಗೆ ಬಂದಿತ್ತು. ಭಾರತದಲ್ಲಿ ಸತ್ಯಂ ಕಂಪೆನಿಯ ಆಡಿಟ್ ನಮ್ಮ ಲೆಕ್ಕಪರಿಶೋಧನೆ ವ್ಯವಸ್ಥೆಯ ದೋಷಗಳನ್ನು ಎತ್ತಿತೋರಿಸುತ್ತಿವೆ. ಇವುಗಳನ್ನು ತಪ್ಪಿಸಬೇಕಿದೆ ಎಂದರು.

ಉದ್ಯಮಿ ನಿತೀನ ಕುಲಕರ್ಣಿ, ಪ್ರತಿ ಯೊಂದು ಆವಿಷ್ಕಾರಕ್ಕೂ ನಾವು ಪಾಶ್ಚಿ ಮಾತ್ಯ ದೇಶಗಳತ್ತ ನೋಡುತ್ತಿದ್ದೇವೆ. ಅಲ್ಲಿ ಆವಿಷ್ಕರಿಸಿದ ತಂತ್ರಜ್ಞಾನವನ್ನು ನಾವು ಬಳಸುತ್ತಿದ್ದೇವೆ. ನಮ್ಮ ದೇಶದಲ್ಲಿ ತಂತ್ರಜ್ಞಾನವನ್ನು ಆವಿಷ್ಕರಿಸುವುದು ಯಾವಾಗ ಎಂದು ಪ್ರಶ್ನಿಸಿದರು.

ಬಿ.ಎಲ್.ಡಿ.ಇ. ಡೀಮ್ಡ ವಿ.ವಿ ಕುಲಪತಿ ಡಾ.ಬಿ.ಜಿ. ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು. ಕಿರಣ ಇನಾಮದಾರ, ಪ್ರಾಚಾರ್ಯ ಎಸ್.ಎಸ್. ಚೌಕಿಮಠ, ಉಪ ಪ್ರಾಚಾರ್ಯ ಎಸ್.ಜಿ. ತಾಳಿಕೋಟಿ, ವಿಲಾಸ ಬಗಲಿ, ಡಿ.ಬಿ. ಹಿರೇಕುರಬರ, ಭಾರತಿ ಹಿರೇಮಠ, ಶರದ್ ರೋಡಗಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.