ADVERTISEMENT

ವಿಜಯಪುರ: ವಿವಿ ಆವರಣದಲ್ಲಿರುವ ಅಕ್ಕಮಹಾದೇವಿ ಅರೆಬೆತ್ತಲೆ ಮೂರ್ತಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 12:45 IST
Last Updated 22 ಜುಲೈ 2025, 12:45 IST
   

ವಿಜಯಪುರ: ‘ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಸದ್ಯ ಇರುವ ಅಕ್ಕಮಹಾದೇವಿಯ ಅರೆಬೆತ್ತಲೆ ಮೂರ್ತಿ ತೆರವುಗೊಳಿಸಿ, ಶುಭ್ರ ವಸ್ತ್ರದ ಸೀರೆಯುಟ್ಟ ಅಕ್ಕನ ಮೂರ್ತಿ ನಿಲ್ಲಿಸಬೇಕು’ ಎಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಆರ್‌. ಪಟ್ಟಣ ಆಗ್ರಹಿಸಿದರು.  

‘ವಿರಾಗಿಣಿ ಅಕ್ಕಮಹಾದೇವಿ ಎಂದೂ ಅರೆಬೆತ್ತಲೆಯಾಗಿರಲಿಲ್ಲ. ಶರಣ ಸಂಕುಲದ ಶ್ರೇಷ್ಠ ಅನುಭಾವಿಯಾಗಿದ್ದ ಅವರು ಅರೆಬೆತ್ತಲೆಯಾಗಿ ಬಂದಿಲ್ಲ ಎನ್ನುವುದಕ್ಕೆ ಹಲವು ಉಲ್ಲೇಖ ಹಾಗೂ ಪುರಾವೆಗಳಿವೆ. ಆದರೆ, ಕೆಲವರು ಅಕ್ಕನನ್ನು ಅರೆಬೆತ್ತಲೆಯಾಗಿ ಚಿತ್ರಿಸಿ ನಾಗರಿಕ ಸಮಾಜವು ತಲೆ ತಗ್ಗಿಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಅರೆಬೆತ್ತಲೆ ಮಾಡಿರುವುದು ಶರಣರಿಗೆ ಹಾಗೂ ವಿರಾಗಿಣಿ ಅಕ್ಕಮಹಾದೇವಿಗೆ ಮಾಡಿದ ದ್ರೋಹ ಮತ್ತು ಅಪಮಾನವಾಗಿದೆ’ ಎಂದರು.

ADVERTISEMENT

ಅಧ್ಯಯನ ಪೀಠ:

‘ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಬೇಕು ಮತ್ತು ಅಗತ್ಯ ಇರುವ ಅನುದಾನವನ್ನು ಒದಗಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

‘ಬಸವೇಶ್ವರರ ಜನ್ಮ ಸ್ಥಳವಾದ ವಿಜಯಪುರ ಜಿಲ್ಲೆಯ ಹೆಸರನ್ನು ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ವಚನಗಳ ಸಂರಕ್ಷಣೆಗೆ ಶ್ರಮಿಸಿದ ಫ.ಗು.ಹಳಕಟ್ಟಿ ಅವರ ಹೆಸರಿನಲ್ಲಿ ‘ಪಂಪ ಪ್ರಶಸ್ತಿ’ ಮಾದರಿಯಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು’ ಎಂದು ಆಗ್ರಹಿಸಿದರು.

‘ನ್ಯಾಯಮೂರ್ತಿ ನಾಗಮೋಹನದಾಸ್‌ ಸಮಿತಿ ನೀಡಿರುವ ವರದಿಯಂತೆ ಲಿಂಗಾಯತ ಧರ್ಮಿಯರನ್ನು ಅಲ್ಪ ಸಂಖ್ಯಾತ ಎಂದು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿದರು.

ಪಂಚಾಚಾರ್ಯರಿಗೆ ಸಂಬಂಧವಿಲ್ಲ:

‘ಪಂಚಾಚಾರ್ಯರಿಗೂ ಬಸವ ತತ್ವಕ್ಕೂ ಯಾವುದೇ ಸಂಬಂಧವಿಲ್ಲ, ಎರಡರ ನಡುವೆ ಸಾಕಷ್ಟು ಭಿನ್ನತೆ ಇದೆ’ ಎಂದು ಡಾ. ಶಶಿಕಾಂತ ಆರ್‌. ಪಟ್ಟಣ ಹೇಳಿದರು.

‘ಬಸವಣ್ಣ ಎಲ್ಲಿಯೂ ವೀರಶೈವ ಪದ ಬಳಸಿಲ್ಲ, ವೀರಶೈವ ಪದ ಬಳಕೆ 1386ರಲ್ಲಿ ಬಂದಿದೆ. ಅದಕ್ಕೂ ಮೊದಲು ಇರಲಿಲ್ಲ’ ಎಂದು ತಿಳಿಸಿದರು.

‘ಬಸವಣ್ಣ ಹಿಂದೂ ಅಥವಾ ವೀರಶೈವ ವಿರೋಧಿಯಲ್ಲ. ಹಾಗೆಯೇ, ಬಸವಣ್ಣ ವೀರಶೈವನೂ ಅಲ್ಲ, ಹಿಂದುವು ಅಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.