ವಿಜಯಪುರ: ಸೈಕಲ್ನಲ್ಲಿ ಅಮರನಾಥಯಾತ್ರೆ ಕೈಗೊಂಡಿರುವ ಬೆಂಗಳೂರಿನ ರಾಧಕೃಷ್ಣ ಎಂಬ ಸಾಧು ನಗರಕ್ಕೆ ಮಂಗಳವಾರ ಆಗಮಿಸಿದರು.
ಇಲ್ಲಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೂಮಾಲೆ ಹಾಕುವ ಮೂಲಕ ಸ್ವಾಗತ ಕೋರಿ, ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಧು, ಜೂನ್ 11ರಿಂದ ಯಾತ್ರೆ ಆರಂಭಿಸಿದ್ದು, ಜುಲೈ 21ಕ್ಕೆ ಅಮರನಾಥ ತಲುಪುವ ಉದ್ದೇಶ ಹೊಂದಿದ್ದೇನೆ. ಆಗಸ್ಟ್3ರ ವರೆಗೆ ಅಮರನಾಥದಲ್ಲೇ ಇದ್ದು, ಬಳಿಕ ಮರಳುತ್ತೇನೆ ಎಂದರು.
ಬೆಂಗಳೂರಿನಿಂದ ಹೊರಟು ದೊಡ್ಡಬಳ್ಳಾಪುರ, ಹಿಂದೂಪುರ, ಪಾವಗಡ, ಕುಷ್ಠಗಿ, ವಿಜಯಪುರ, ಸೊಲ್ಲಾಪುರ, ಜೈಪುರ, ಇಂದೋರ್, ಉಜ್ಜೈನಿ ಮೂಲಕವಾಗಿ ಅಮರನಾಥಕ್ಕೆ ಸೈಕಲ್ನಲ್ಲಿ ತೆರಳುತ್ತಿರುವುದಾಗಿ ಹೇಳಿದರು.
ಪ್ರತಿ ದಿನ 60 ಕಿ.ಮೀ.ದೂರ ಕ್ರಮಿಸುತ್ತೇನೆ. ಭಕ್ತರ ಮನೆಯಲ್ಲಿ ಆಶ್ರಯ ಪಡೆದು, ಅಲ್ಲಿಯೇ ಊಟೋಪಹಾರ ಮಾಡುತ್ತೇನೆ ಎಂದು ಹೇಳಿದರು.
ಯಾತ್ರೆಯ ಉದ್ದಕ್ಕೂ ಸ್ವಚ್ಛತೆ ಬಗ್ಗೆ ಜಾಗೃತಿ ಮತ್ತು ಪ್ಲಾಸ್ಟಿಕ್, ಗುಟ್ಕಾ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದರು.
ಈ ಹಿಂದೆ ಪಾದಯಾತ್ರೆ ಮೂಲಕ ಚಾರ್ಧಾಮ್ ಯಾತ್ರೆ, ಭಾರತ ದರ್ಶನ ಯಾತ್ರೆ ಮಾಡಿದ್ದೇನೆ ಎಂದು ಹೇಳಿದರು. ಬಿಜೆಪಿ ಮುಖಂಡ ರಾಹುಲ್ ಜಾದವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.