ADVERTISEMENT

ವೈದಿಕ ವ್ಯವಸ್ಥೆಯನ್ನೇ ಬಸವಣ್ಣ ಒಡೆದಿದ್ದರು: ಪ್ರೋ.ಎಸ್.ಜಿ.ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:36 IST
Last Updated 15 ಡಿಸೆಂಬರ್ 2025, 5:36 IST
ವಿಜಯಪುರದ ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಕ್ಕನ ಅರಿವು ತಂಡದ ಸದಸ್ಯರ ಕೃತಿಗಳ ಲೋಕಾರ್ಪಣೆ ಜರುಗಿತು
ವಿಜಯಪುರದ ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಕ್ಕನ ಅರಿವು ತಂಡದ ಸದಸ್ಯರ ಕೃತಿಗಳ ಲೋಕಾರ್ಪಣೆ ಜರುಗಿತು   

ವಿಜಯಪುರ: ಬಸವಣ್ಣ ತಾವು ಹುಟ್ಟಿದ ಮೂಲವನ್ನು ಪಾಪದ ಮೂಲವೆಂದುಕೊಂಡು ಅದರಿಂದ ಹೊರ ಬಂದು ಅದಕ್ಕೆ ವಿರುದ್ಧವಾದ ರೀತಿಯಲ್ಲಿ ತಮ್ಮ‌ ಮನೆಯನ್ನು ಸಮಾಜವಾದದ ಸಮಾನತೆಯ ಮನೆ‌ ಮಾಡಿದರು ಎಂದು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.

ನಗರದ ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜು ಸಬಾಂಗಣದಲ್ಲಿ ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಜಯಪುರ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 3500 ವರ್ಷಗಳು ಸಾಂಸ್ಕೃತಿಕ ದಬ್ಬಾಳಿಕೆಯ ವಿರುದ್ಧವಾಗಿ ಬಸವಣ್ಣನವರು ಸಂಘಟನೆ ಮಾಡಿ, ಆ ಸಂಘಟನೆಯ ಮೂಲಕ ಮಹಾ ಮನೆ‌ ಮಾಡಿದರು. ಅವರಿವರೆನ್ನದೆ ಎಲ್ಲರನ್ನು ತಮ್ಮ‌ಮನೆಯ ಒಳಕ್ಕೆ ಬಿಟ್ಟುಕೊಂಡು ವೈದಿಕ ವ್ಯವಸ್ಥೆಯನ್ನೇ ಒಡೆದರು ಎಂದರು.

ನಡೆನುಡಿ ಸಿದ್ಧಾಂತದ ಧರ್ಮವೇ ಲಿಂಗಾಯತ ಧರ್ಮ. ಶರಣರು ವೈದಿಕ‌ ಪಠ್ಯಗಳನ್ನು ತಿರಸ್ಕರಿಸಿದರು. 336 ವಚನಗಳು 41 ಜನ ವಚನಕಾರರು ವೈದಿಕ ಪಠ್ಯವನ್ನು ತಿರಸ್ಕರಿಸಿದ್ದಾರೆ. ಅದನ್ನು ಬೆಂಕಿಗೆ ಹಾಕಿ, ಸಮುದ್ರಕ್ಕೆ ಎಸೆಯಿರಿ ಎನ್ನುವಷ್ಟು ನಿಷ್ಠುರವಾಗಿ ತಿರಸ್ಕರಿಸಿದ್ದಾರೆ ಎಂದರು.

ADVERTISEMENT

ಗಾಂಧೀಜಿ ಅವರು ಭಾರತಕ್ಕೆ ಬರುವ ಮೊದಲು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ನಡೆಯುತ್ತಿತ್ತು ಆದರೆ, ಅದು ಅಸಂಘಟಿತ ರೀತಿಯಲ್ಲಿ ನಡೆಯುತ್ತಿತ್ತು, ಗಾಂಧೀಜಿ ಭಾರತಕ್ಕೆ ಬಂದ ಮೇಲೆ ಚಳವಳಿಯನ್ನು ಸಂಘಟನಾತ್ಮಕ ಶಕ್ತಿಯಾಗಿ ಸಂಘಟಿಸಿ ಮುನ್ನಡೆಸಿದರು. ಇನ್ನು ಗಾಂಧೀಜಿ ಜನಿಸಿದ್ದು ಭಾರತದಲ್ಲಿ. ಆದರೆ ಚಳವಳಿಗಾರ ಜನಸಿದ್ದು ಸೌಥ್ ಆಫ್ರಿಕಾದಲ್ಲಿ ಎಂದರು.

ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ಸುಮಾರು 93 ಪುರಾತತ್ವ ಇಲಾಖೆಯಿಂದ ರಕ್ಷಣೆಗೊಳಪಟ್ಟ ಸ್ಮಾರಕಗಳು ವಿಜಯಪುರದಲ್ಲಿವೆ. ದೆಹಲಿ ನಂತರ ಅತಿ ಹೆಚ್ಚು ಸ್ಮಾರಕಗಳು ಇರುವುದು ವಿಜಯಪುರದಲ್ಲಿಯೇ. ಆದರೆ ಇದರ ಬಗ್ಗೆ ಇಲ್ಲಿರುವ ನಮಗೆ ಮಾಹಿತಿ ಇಲ್ಲ. ಇನ್ನು ವಿಜಯಪುರದ ಶರಣರು, ಸಂತರ ಬಗ್ಗೆಯಂತೂ ನಮಗೆ ಮಾಹಿತಿಯೇ ಇಲ್ಲ ಎಂದರು.

ಮಧುರ ಚೆನ್ನರು ಕರ್ನಾಟಕದಲ್ಲಿ ಜನಿಸದೇ ಇಂಗ್ಲೆಂಡಿನಲ್ಲಿ ಜನಿಸಿದ್ದರೆ ಅವರು ಜಾನ್ ಕಿಟ್ಸ್‌ರನ್ನು ಸಹ ಮೀರಿಸುತ್ತಿದ್ದರು. ಇಂದು ಉತ್ತರ ಕರ್ನಾಟಕದ ಜಾನಪದ ಹಾಡುಗಳೆಂದು ಹೇಳಿಕೊಂಡು ಅಸಹ್ಯವಾಗಿರುವ ಹಾಡುಗಳನ್ನು ಹಾಕಿಕೊಂಡು ಓಡಾಡುತ್ತಿದ್ದೇವೆ. ಆದರೆ ಇಂದಿನ ದಿನಗಳಲ್ಲಿ ಗರತಿ ಹಾಡುಗಳನ್ನು ಕೇಳುವವರು ಎಷ್ಟ ಜನ ಇದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಅಕ್ಕನ ಅರಿವು ತಂಡದ ಸದಸ್ಯರ ಕೃತಿಗಳ ಲೋಕಾರ್ಪಣೆಯೂ ಜರುಗಿತು.

ಡಾ.ಮಹಾಂತೇಶ ಬಿರಾದಾರ, ಶಶಿಕಾಂತ ಪಟ್ಟಣ, ಉಮಾಕಾಂತ ಶೆಟ್ಟರ್, ಎಮ್.ಎಸ್.ಮಧಭಾವಿ, ಸುಧಾ ಪಾಟೀಲ, ಸರಸ್ವತಿ ಪಾಟೀಲ, ಹನುಮಾಕ್ಷಿ ಗೂಗಿ, ಸವಿತಾ ದೇಶಮುಖ, ನಿರ್ಮಲಾ ಬಟ್ಟಲ್, ವಿಜಯಲಕ್ಷ್ಮೀ ಹಂಗರಗಿ, ಶರಣು ಸಬರದ, ಅಶೋಕ ಹಂಚಲಿ ಮತ್ತಿತರರು ಉಪಸ್ಥಿತರಿದ್ದರು.

ಚಡಚಣದಲ್ಲಿ ಟಿಪ್ಪು ಸುಲ್ತಾನ್, ಪುನೀತ್‌ರಾಜ್ ಕುಮಾರ್ ವೃತ್ತಗಳಿವೆ. ಆದರೆ ಸಾರಸ್ವತ ಲೋಕ ಬೆಳಗಿಸಿದ ಮಹಾನ್ ವ್ಯಕ್ತಿ ಸಿಂಪಿ ಲಿಂಗಣ್ಣ ಅವರ ವೃತ್ತ ಇಲ್ಲದಿರುವುದು ನೋವಿನ ಸಂಗತಿ.
-ಬಸವರಾಜ ಯಲಿಗಾರ, ಡಿವೈಎಸ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.