ವಿಜಯಪುರ: ಇಲ್ಲಿನ ಬಂಜಾರ ಕಸೂತಿ ಸಂಸ್ಥೆಗೆ ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್.ಐ.ಎಫ್.ಟಿ) ಸಂಸ್ಥೆಯ ವಿದ್ಯಾರ್ಥಿಗಳು ಕ್ಷೇತ್ರಾಧ್ಯಯನಕ್ಕಾಗಿ ಭೇಟಿ ನೀಡಿದರು.
ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ. ಪಾಟೀಲ, ‘ಜಿಲ್ಲೆಯಲ್ಲಿ ಮೊದಲಿನಿಂದಲೂ ಲಂಬಾಣಿ ಕಲೆ, ಕಸೂತಿ ಇತ್ಯಾದಿಗಳು ಬೇರೂರಿಕೊಂಡು ಬಂದಿದ್ದವು. ಈ ಸಾಂಪ್ರದಾಯಿಕ ಕೌಶಲವನ್ನು ಪುನಶ್ಚೇತನಗೊಳಿಸುವ
ಉದ್ದೇಶದಿಂದ ಬಂಜಾರ ಕಸೂತಿ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ’ ಎಂದರು.
‘ಏಳೆಂಟು ವರ್ಷಗಳಿಂದ ಬಂಜಾರ ತಾಂಡಾಗಳಲ್ಲಿರುವ ಮಹಿಳೆಯರನ್ನು ಸಂಪರ್ಕಿಸಿ, ಈ ಕಲೆಗೆ ಸಮಕಾಲೀನ ಸ್ಪರ್ಶ ನೀಡಲಾಗುತ್ತಿದೆ. ಇದಕ್ಕೆ ಮಾರುಕಟ್ಟೆಯನ್ನೂ ಸೃಷ್ಟಿಸಲಾಗಿದೆ. ಇಲ್ಲಿ ಸಿದ್ಧಪಡಿಸಲಾಗುವ ಉತ್ಪನ್ನಗಳನ್ನು ದೇಶದ ವಿವಿಧೆಡೆಗಳಲ್ಲಿನ ಪ್ರದರ್ಶನ ಮತ್ತು ವಾಣಿಜ್ಯ ಮೇಳಗಳಿಗೂ ತಲುಪಿಸಲಾಗಿದೆ’ ಎಂದು ತಿಳಿಸಿದರು.
‘ಸದ್ಯಕ್ಕೆ ಬೆಂಗಳೂರಿನ ಎನ್.ಐ.ಎಫ್.ಟಿ. ಸಂಸ್ಥೆಯ ನಿಟ್-ವೇರ್ ವಿಭಾಗದ 38 ವಿದ್ಯಾರ್ಥಿನಿಯರು ಕ್ಷೇತ್ರಾಧ್ಯಯನಕ್ಕೆ ಬಂದಿದ್ದು, ಪ್ರತ್ಯಕ್ಷ ಅನುಭವಕ್ಕೆ ತಾಂಡಾಗಳಿಗೆ ಭೇಟಿ ನೀಡುತ್ತಿದ್ದಾರೆ. ಇವರಿಗೆ ಸಂಸ್ಥೆಯ ಸಿಬ್ಬಂದಿ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದು, ಬಂಜಾರ ಜೀವನಶೈಲಿ, ಕಸೂತಿಯ ಸೂಕ್ಷ್ಮತೆ ಇವುಗಳ ಚಿತ್ರೀಕರಣ ನಡೆಯುತ್ತಿದೆ’ ಎಂದು ಅವರು ಹೇಳಿದರು.
ಸಂಸ್ಥೆಯ ಸಹ ಸಂಸ್ಥಾಪಕಿ ಸೀಮಾ ಕಿಶೋರ್, ‘ಕೆಲ ವರ್ಷಗಳ ಹಿಂದೆ ಜನರಿಗೆ ರಾಜಾಸ್ಥಾನಿ ಮತ್ತು ಗುಜರಾತಿ ಬಂಜಾರ ಕಲೆಗಳ ಬಗ್ಗೆ ಮಾತ್ರ ಗೊತ್ತಿತ್ತು. ಈಗ ಕರ್ನಾಟಕದ ಕಸೂತಿ ಕೂಡ ಜನಪ್ರಿಯವಾಗಿದೆ. ಈವರೆಗೆ ನಾವು 18 ಮೇಳಗಳಲ್ಲಿ ಪಾಲ್ಗೊಂಡಿದ್ದು, 2024ರಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಇಂಟರ್ ನ್ಯಾಷನಲ್ ಟ್ರೇಡ್ ಫೇರ್ ನಲ್ಲೂ ಭಾಗವಹಿಸಿದ್ದೆವು. 15 ತಾಂಡಾಗಳ ನೂರಕ್ಕೂ ಹೆಚ್ಚು ಮಹಿಳೆಯರು ನಮ್ಮ ತಂಡದಲ್ಲಿದ್ದು, ಇಲ್ಲಿನ ಉತ್ಪನ್ನಗಳನ್ನು ಅಮೆರಿಕಾ ಮತ್ತು ಯೂರೋಪ್ ದೇಶಗಳಿಗೂ ಕಳಿಸಲು ವ್ಯವಸ್ಥೆ ರೂಪಿಸಲಾಗಿದೆ’ ಎಂದರು.
‘ಇದು ಲಾಭರಹಿತ ಸಂಸ್ಥೆಯಾಗಿದೆ. ಈಗ ಅಧ್ಯಯನಕ್ಕೆ ಬಂದಿರುವವರಿಗೆ ಗಾಜು ಕಟ್ಟುವುದು, ಹೊಲಿಗೆ ಹಾಕುವುದನ್ನು ಕಲಿಸುತ್ತಿದ್ದೇವೆ. ಈ ಮೂಲಕ ಮಹಿಳೆಯರ ಸಬಲೀಕರಣವೂ ಸಾಧ್ಯವಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.