ADVERTISEMENT

ವಿಜಯಪುರ: ಬಿಜೆಪಿ ಎಂಎಲ್‌ಸಿಯನ್ನು ಟೋಲ್‌ನಲ್ಲಿ ಒಂದು ಗಂಟೆ ತಡೆದ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 16:20 IST
Last Updated 21 ಡಿಸೆಂಬರ್ 2025, 16:20 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಿಜಯಪುರ: ನಗರ ಸಮೀಪದ ಸೋಲಾಪುರ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಹಿಟ್ನಳ್ಳಿ ಟೋಲ್‌ ನಾಕಾದಲ್ಲಿ ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಅವರನ್ನು ಟೋಲ್‌ ಸಿಬ್ಬಂದಿ ಪಾಸ್‌ ಇದ್ದರೂ ಕಾರನ್ನು ಬಿಡದೇ ಸುಮಾರು ಒಂದು ಗಂಟೆ ಕಾಯಿಸಿರುವ ಪ್ರಸಂಗ ಭಾನುವಾರ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವ ಪ್ರಸಾದ್‌, ‘ವಿಜಯಪುರದಲ್ಲಿ ಸೋಮವಾರ ನಡೆಯುವ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಸರ್ಕಾರಿ ಪಾಸ್‌ ಇರುವ ಕಾರಿನಲ್ಲಿ ಬರುವಾಗ ಟೋಲ್‌ ಸಿಬ್ಬಂದಿ ತಡೆದರು. ನೀವು ಎಂಎಲ್‌ಸಿನಾ? ನಿಮ್ಮ ಗುರುತಿನ ಚೀಟಿ ತೋರಿಸಿ? ಎಂದು ನನ್ನ ಪಾಸ್‌ ಕಿತ್ತುಕೊಂಡರು, ಜೊತೆಗೆ ನನ್ನ ಆಪ್ತ ಸಹಾಯಕನ ಫೋನ್‌ ಕಿತ್ತುಕೊಂಡರು, ಯಾರಿಗೆ ಬೇಕಾದರೂ ದೂರು ನೀಡಿ, ನಿಮ್ಮನ್ನು ಬಿಡುವುದಿಲ್ಲ ಎಂದು ಉದ್ಧಟತನದಿಂದ ವರ್ತಿಸಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪ್ರಕರಣದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಒಂದು ಗಂಟೆ ನಂತರ ಬಂದು ಕ್ಷಮೆ ಕೇಳಿ ಬಿಟ್ಟರು’ ಎಂದು ಹೇಳಿದರು.

‘ಹೇಗೆ ಮಾತನಾಡಬೇಕು ಎಂಬುದನ್ನು ಟೋಲ್‌ ಸಿಬ್ಬಂದಿಗೆ ಕಲಿಸಿ, ಅವರ ಮೇಲೆ ಯಾವುದೇ ಕ್ರಮಕೈಗೊಳ್ಳಬೇಡಿ, ಕೆಲಸದಿಂದ ತೆಗೆಯಬೇಡಿ’ ಎಂದೂ ಅಧಿಕಾರಿಗಳಿಗೆ ಕೇಶವ ಪ್ರಸಾದ್‌ ತಿಳಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಜೆಪಿ ಮುಖಂಡರು ಟೋಲ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಸ್ಥಳಕ್ಕೆ ಬಂದು ವಿಧಾನ ಪರಿಷತ್‌ ಸದಸ್ಯ ಕೇಶವ ಪ್ರಸಾದ್‌ ಅವರನ್ನು ವಿಜಯಪುರಕ್ಕೆ ತೆರಳಲು ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.