ADVERTISEMENT

ಸಮಾಜಮುಖಿ ನಿತ್ಯ ಸುಖಿ: ಚೌಕಿಮಠ

‘ದತ್ತಪಂಥದಲ್ಲಿ ಶ್ರೀ ಸದಾನಂದರು’ ಕೃತಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 9:40 IST
Last Updated 16 ಡಿಸೆಂಬರ್ 2019, 9:40 IST
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ  ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ದತ್ತ ಪಂಥದಲ್ಲಿ ಶ್ರೀ ಸದಾನಂದರು’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ  ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ದತ್ತ ಪಂಥದಲ್ಲಿ ಶ್ರೀ ಸದಾನಂದರು’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು   

ವಿಜಯಪುರ: ‘ನಾನು, ನನ್ನದು ಎನ್ನುವ ಸ್ವಾರ್ಥ ಬಿಟ್ಟು, ಇದೆಲ್ಲವೂ ಭಗವಂತನ ಪ್ರಸಾದ ಎಂದು ತಿಳಿದಾಗ ಜೀವನದಲ್ಲಿ ಯಾವುದೇ ಸಂಕಟ, ತಳಮಳಗಳು ಬರಲಾರವು’ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್.ಚೌಕಿಮಠ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಸಿದ್ಧೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ದತ್ತಗುರು ಸದಾನಂದ ಪ್ರಕಾಶನ ಹಾಗೂ ದತ್ತ ಸ್ವಯಂ ಸೇವಕರ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಯುವ ಸಾಹಿತಿ ಸತೀಶ ಆಹೇರಿ ಅವರ ‘ದತ್ತ ಪಂಥದಲ್ಲಿ ಶ್ರೀ ಸದಾನಂದರು’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದತ್ತ ಗುರು ಸದಾನಂದ ಮಹಾರಾಜರು ಪವಾಡ ಪುರುಷರು, ದತ್ತ ಪರಂಪರೆಯನ್ನು ಈ ಭಾಗದಲ್ಲಿ ಬೆಳೆಸಿದವರು. ಅವರ ಮಹಿಮೆ ಕೊಂಡಾಡುವ ಜೊತೆಗೆ ಆಧ್ಯಾತ್ಮಿಕ ಒಲವು ಬೆಳೆಸುವ ದತ್ತ ಪಂಥದಲ್ಲಿ ಈ ಕೃತಿಯನ್ನು ಪರಿಚಯಿಸಿದ್ದಾರೆ. ಎಲ್ಲ ಪಂಥಗಳನ್ನು ಮೀರಿ ಮನುಷ್ಯ ಪಂಥವನ್ನು ಬೆಳೆಸಬೇಕು. ಇಂತಹ ಯುವ ಸಾಹಿತಿಗಳು ಆಧ್ಯಾತ್ಮಿಕ ಪುಸ್ತಕಗಳ ಬರ ನೀಗಿಸುವಲ್ಲಿ ನಿರಂತರ ಬರೆದು ಆಕಾಶದೆತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.

ADVERTISEMENT

ಬಿಎಲ್‌ಡಿಇ ಸಂಸ್ಥೆಯ ಎಸ್.ಎಸ್.ಕಾಲೇಜಿನ ಆಡಳಿತಾಧಿಕಾರಿ ಐ.ಎಸ್.ಕಾಳಪ್ಪನವರ ಮಾತನಾಡಿ, ‘ಸಾರಸ್ವತ ಲೋಕದಲ್ಲಿ ಪಯಣಿಸುವುದೆಂದರೆ ಅದೊಂದು ಸಾರ್ಥಕ ಕ್ಷಣ. ವಿಷಯ ಅಧ್ಯಯನಗೈದು, ಅಕ್ಷರಗಳನ್ನು ಜೋಡಿಸಿ, ಭಾವಸ್ಪುರಿಸಿ, ಸಾಹಿತ್ಯ ರಚಿಸುವುದು ಸವಾಲಿನ ವಿಷಯ. ಇಂತಹ ಸವಾಲನ್ನು ಎದುರಿಸಿ ಯಶಸ್ವಿಯಾದ ಯುವ ಸಾಹಿತಿ ಸತೀಶ ಆಹೇರಿ ಅವರ ಕೃತಿ ಬೆಳಕು ಕಾಣಲು ದತ್ತ ಗುರು ಸದಾನಂದರ ಕೃಪಾಶೀರ್ವಾದವೇ ಕಾರಣವಾಗಿದೆ’ ಎಂದರು.

ಹಿರಿಯ ಸಾಹಿತಿ ಎ.ಐ.ಯಾಳಗಿ ಮಾತನಾಡಿ, ‘ಇಚ್ಛಾಶಕ್ತಿಗಳೇ ಪವಾಡಗಳಾಗುತ್ತವೆ. ಪುರಾಣ, ಹರಿಕಥೆ, ವಚನ, ಕೀರ್ತನೆಗಳೆಲ್ಲವೂ ಮನದ ಮೈಲಿಗೆಯನ್ನು ತೊಡೆದು ಹಾಕುತ್ತವೆ’ ಎಂದು ತಿಳಿಸಿದರು.

ಉದ್ಯಮಿಗ ಜಗದೀಶ ಗಿರಗಾಂವಿ ಮಾತನಾಡಿ, ‘ದತ್ತಗುರು ಸದಾನಂದರ ಭಕ್ತರು ಬರೀ ಸತ್ಸಂಗ, ಭಜನೆಯಷ್ಟೆ ಅಲ್ಲ, ದತ್ತ ಗುರು ಸದಾನಂದ ಪ್ರಕಾಶನದಿಂದ ಒಳ್ಳೆಯ ಅಧ್ಯಾತ್ಮಿಕ ಪುಸ್ತಕಗಳನ್ನು ಹೊರ ತರಬೇಕಾಗಿದೆ’ ಎಂದರು.

ದತ್ತಗುರು ಸದಾನಂದ ಧ್ಯಾನ ಮತ್ತು ಅಧ್ಯಾತ್ಮಿಕ ಕೇಂದ್ರದ ಮುಖಸ್ಥ ಡಾ. ಎನ್.ಬಿ.ವಜಿರಕರ ಮಾತನಾಡಿದರು. ಸತೀಶ ಆಹೇರಿ ಅನಿಸಿಕೆ ಹಂಚಿಕೊಂಡರು.

ಹಿರಿಯ ಸಾಹಿತಿ ಮಹಾಂತ ಗುಲಗಂಜಿ, ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ, ಸಂತೋಷಕುಮಾರ ನಿಗಡಿ, ಅಶೋಕ ಅಂಬಾಜಿ, ಸುನೀಲ ಜೈನಾಪುರ, ಸಂತೋಷ ಹಾಲಳ್ಳಿ, ಶರಣಗೌಡ ಪಾಟೀಲ, ಸಚಿನ್‌ ವಳಸಂಗ, ನವೀನ ಕಟ್ಟಿಮನಿ, ಮಲಕಾರಿ ಸಾಹುಕಾರ, ಶ್ರೀಶೈಲ ತೇಲಿ, ಶ್ರೀಕಾಂತ ಗದ್ಯಾಳ ಇದ್ದರು.

ಎಸ್.ಆರ್.ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಅಶೋಕ ಅಂಬಾಜಿ ನಿರೂಪಿಸಿ, ಅಮರೇಶ ಸಾಲಕ್ಕಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.