ADVERTISEMENT

ಸರ್ಕಾರದ ಜನವಿರೋಧಿ ನೀತಿಗೆ ಖಂಡನೆ: ಎಸ್.ಯು.ಸಿ.ಐ ಪ್ರತಿಭಟನೆ

ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 11:11 IST
Last Updated 20 ಮಾರ್ಚ್ 2023, 11:11 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿದರು   

ವಿಜಯಪುರ: ಸರ್ಕಾರಿ ಆಸ್ಪತ್ರೆಯ ಉದ್ದೇಶಿತ ಖಾಗೀಕರಣ ವಿರೊಧಿಸಿ, ಪಡಿತರದಲ್ಲಿನ ಅಕ್ಕಿಯ ಕಡಿತ ಹಿಂಪಡೆದು ಹಿಂದಿನಷ್ಟೇ ಪ್ರಮಾಣವನ್ನೇ ಮುಂದುವರೆಸಲು ಆಗ್ರಹಿಸಿ, ಎಲ್.ಪಿ.ಜಿ ಸಿಲಿಂಡರ್ ದರ ಹೆಚ್ಚಳ ಖಂಡಿಸಿ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಎಸ್.ಯು.ಸಿ.ಐ ಕಮ್ಯೂನಿಸ್ಟ್‌ ಪಕ್ಷದ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಎಸ್.ಯು.ಸಿ.ಐ ಜಿಲ್ಲಾ ಸಮಿತಿ ಸದಸ್ಯ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಸಾಮಾನ್ಯ ಜನರ, ಕೂಲಿಕಾರರ, ಬಡವರ ಮತ್ತು ಮಧ್ಯಮ ವರ್ಗದ ಜನರಿಗೆ ಆಸರೆಯಾದ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡುವುದಾಗಿ ಸರ್ಕಾರ ಹೇಳುತ್ತಿದೆ. ಈಗಾಗಲೇ ಕೋವಿಡ್ ಮತ್ತು ಲಾಕ್‍ಡೌನ್‍ನಿಂದ ಜನತೆ ಏಳಲಾಗದ ಪೆಟ್ಟನ್ನು ತಿಂದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಗಿರುವ ಆಸ್ಪತ್ರೆಯನ್ನೇ ಸುಸಜ್ಜಿತಗೊಳಿಸಿ, ಮೂಲ ಸೌಲಭ್ಯ ಒದಗಿಸಿ ಶಕ್ತಿಯುತಗೊಳಿಸುವುದರ ಬದಲು ಖಾಸಗೀಕರಣ ಮಾಡುತ್ತಿರುವುದು ಖಂಡನೀಯ. ಕೂಡಲೇ ಖಾಸಗೀಕರಣಗೊಳಿಸುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಡುಬಡವರಿಗೆ ಅನ್ನಭಾಗ್ಯ ಯೋಜನೆಯು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಈಗೀರುವ ರಾಜ್ಯ ಸರ್ಕಾರ ಈ ಹಿಂದೆ ಪ್ರತಿಯೊಬ್ಬರಿಗೆ ಕೊಡುತ್ತಿದ್ದ 10 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ ಈಗ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಮಾತ್ರ ಕೊಡುತ್ತಿದ್ದಾರೆ. ಇದು ಬಡವರ ಹೊಟ್ಟೆಯ ಮೇಲೆ ಹೊಡೆಯುವ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ರಾಜ್ಯದ ಜನತೆ ಬರಕ್ಕಿಡಾದಾಗ ಅಥವಾ ಅತಿವೃಷ್ಠಿಗೀಡಾದಾಗ ಈ ದೇಶದ ಪ್ರಧಾನಿ ನರೇಂದ್ರ ಮೊದಿ, ಗೃಹ ಸಚಿವ ಅಮಿತ್‌ ಶಾ ರಾಜ್ಯದತ್ತ ತಿರುಗಿಯೂ ನೋಡಲಿಲ್ಲ. ಆದರೆ, ಈಗ ಚುನಾವಣೆ ಬಂದಾಗ ವಾರಕ್ಕೊಮ್ಮೆ ಬರುತ್ತಿದ್ದಾರೆ. ಈ ಜನ ವಿರೋಧಿಗಳನ್ನು ತಿರಸ್ಕರಿಸಬೇಕು ಎಂದರು.

ಎಸ್. ಎಸ್. ಬಣಜೀಗೇರ ಮಾತನಾಡಿ, ಕೇಂದ್ರ ಸರ್ಕಾರವು ವಿದ್ಯುಚ್ಚಕ್ತಿ (ತಿದ್ದುಪಡಿ) ಮಸೂದೆ 2022 ಮಂಡಿಸಿದೆ. ದೇಶಾದ್ಯಂತ ಪ್ರಿ-ಪೇಯ್ಡ್ ಮೀಟರ್‌ಗಳನ್ನು ಅಳವಡಿಸುವ ಪ್ರಸ್ತಾಪ ಇಟ್ಟಿದ್ದು, ಅವುಗಳು ನಮ್ಮ ಪ್ರೀಪೇಯ್ಡ್ ಮೊಬೈಲ್ ಫೋನ್ ರಿಚಾರ್ಜ್‌ನಂತೆಯೇ ಇರುತ್ತವೆ. ಅಂದರೆ, ಗ್ರಾಹಕರು ಮೊದಲು ಹಣಪಾವತಿಸಿ, ನಂತರ ವಿದ್ಯುತ್ ಬಳಸಬೇಕಾಗುತ್ತದೆ. ಇಂತ ಜನ ವಿರೋಧಿ ವಿದ್ಯುಚ್ಚಕ್ತಿಯ ಖಾಸಗಿಕರಣವನ್ನು ಜನತೆ ಒಕ್ಕೋರಲಿನಿಂದ ಧಿಕ್ಕರಿಸಬೇಕು ಎಂದರು.

ಎಚ್.ಟಿ.ಭರತಕುಮಾರ ಮಾತನಾಡಿ, ಗೃಹ ಬಳಕೆಯ ಅನಿಲ ಸಿಲಿಂಡರ್ ದರವನ್ನು ಕೇಂದ್ರ ಸರ್ಕಾರ ₹ 50 ಹೆಚ್ಚಳ ಮಾಡಿದೆ. ಇದು ಕಳೆದ 12 ತಿಂಗಳಲ್ಲಿ 6ನೇ ಏರಿಕೆಯಾಗಿದೆ. ಈ ಬಜೆಟ್‌ನಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಅಡುಗೆ ಅನಿಲದ ಸಬ್ಸಿಡಿಯನ್ನು ಶೇ 75ರಷ್ಟು ಕಡಿತ ಮಾಡಿದ್ದಾರೆ. ಬಡವರಿಗೆ ಉಜ್ವಲ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ಹೇಳುತ್ತಾರೆ. ಆದರೆ, ಈ ಉಜ್ವಲ ಫಲಾನುಭವಿಗಳು ಕೂಡ ಸಿಲಿಂಡರಿಗೆ ಇದೇ ಮಾರುಕಟ್ಟೆ ದರವನ್ನು ಕೊಟ್ಟು ಖರೀದಿಸಬೇಕು ಎಂಬುದನ್ನು ಜಾಣ್ಮೆಯಿಂದ ಮರೆಮಾಚುತ್ತಾರೆ ಎಂದರು.

ನಿವೃತ್ತ ಪ್ರಾಚಾರ್ಯರಾದ ಪ್ರೋ. ವಿ. ಎ ಪಾಟೀಲ, ಶಿವಾಜಿ, ಶಿವಬಾಳಮ್ಮ ಕೊಂಡಗೂಳಿ, ಕಾವೇರಿ ರಜಪುತ, ದೀಪಾ, ಬಿಜಾನ್, ಹಮೀದಾ, ಆಸಿಫಾ, ಶಕೀರಾ, ಮೈರುನ್ನಿಸಾ, ಭಾರತಿ, ಮಹಾದೇವಿ. ಗಂಗಮ್ಮ, ಶೈನಾಜ, ಸುರೇಖಾ ಕಡಪಟ್ಟಿ, ಶಿವರಂಜಿನಿ, ಸರೊಜಿನಿ, ಲಕ್ಷ್ಮೀ, ಕೋಮಲ, ದುರ್ಗಾ, ಪೂಜಾ, ರೋಹಿಣಿ, ಕೌಸರ್, ಪ್ರೀತಿ, ಜ್ಯೋತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.