
ಕೊಲ್ಹಾರ: ತಾಲ್ಲೂಕಿನ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ತಾಲ್ಲೂಕಾ ಆಡಳಿತದ ಕಾರ್ಯವೈಖರಿ, ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಕೊಲ್ಹಾರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಆಧಾರ ನೋಂದಣಿ, ಕಂದಾಯ ಗ್ರಾಮ ಮಾಹಿತಿ, ಭೂಮಿ ಪ್ರಗತಿ, ಈ-ಪೌತಿ ಖಾತೆ ಪ್ರಗತಿ, ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆ ಕುರಿತು ಪರಿಶೀಲಿಸಿದರು.
ಸರಕಾರದ ಮಹತ್ವದ ಭೂ-ಸುರಕ್ಷಾ ಯೋಜನೆಯಡಿ ಭೂ-ದಾಖಲೆಗಳು ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆದುಕೊಳ್ಳುವ ಬಗ್ಗೆ ಪರಿಶೀಲನೆ ಮಾಡಿದರು ಮತ್ತು ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಆನ್-ಲೈನ್ ಹಕ್ಕು ಪತ್ರ ನೀಡುವ ಕುರಿತಾಗಿ ನಿರ್ದೇಶನ ನೀಡಿದರು. ಭೂಮಿ ಕೇಂದ್ರದಲ್ಲಿ ದರಖಾಸ್ ಪೋಡಿ ಪ್ರಗತಿ ಕುರಿತು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು, ತದನಂತರ ರೋಣಿಹಾಳ ಗ್ರಾಮದಲ್ಲಿನ ಕೊಲ್ಹಾರ ಪಟ್ಟಣದ ಕಸ ವಿಲೇವಾರಿ ಘಟಕದ ಸ್ಥಳ ವೀಕ್ಷಿಸಿದರು.
ತಾಲ್ಲೂಕಿನಲ್ಲಿರುವ ಕೂಡಗಿಯ ಎನ್ಟಿಪಿಸಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ತೆರಳಿ ಕಚೇರಿ ವಿವಿಧ ಕಡತ ಪರಿಶೀಲನೆ ನಡೆಸಿದರು. ಪ್ರಜಾ ಸೌಧ ನಿರ್ಮಾಣ ಕುರಿತು ಸ್ಥಳ ಪರಿಶೀಲಿಸಿದರು.
ತಹಶೀಲ್ದಾರ ಎಸ್.ಎಂ ಮ್ಯಾಗೇರಿ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರೇಶ ಹಟ್ಟಿ,ಪಿ ಎಸ್ ಐ ಅಶೋಕ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.