ADVERTISEMENT

ವಿಜಯಪುರ: ಕೋಮುದ್ವೇಷ ಅಳಿಸಿ ಸೌಹಾರ್ದತೆ ಉಳಿಸಿ ರ‍್ಯಾಲಿ

ಕರ್ನಾಟಕದಲ್ಲಿ ತಲೆ ಎತ್ತಿದ ಜಂಗಲ್ ರಾಜ್: ಮುಖಂಡರ ಆತಂಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 11:12 IST
Last Updated 13 ಏಪ್ರಿಲ್ 2022, 11:12 IST
ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಬುಧವಾರ ‘ಕೋಮುದ್ವೇಷ ಅಳಿಸಿ ಸೌಹಾರ್ದತೆ ಉಳಿಸಿ’ ರ‍್ಯಾಲಿ ನಡೆಯಿತು
ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಬುಧವಾರ ‘ಕೋಮುದ್ವೇಷ ಅಳಿಸಿ ಸೌಹಾರ್ದತೆ ಉಳಿಸಿ’ ರ‍್ಯಾಲಿ ನಡೆಯಿತು   

ವಿಜಯಪುರ:ನಗರದಲ್ಲಿ ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ‘ಕೋಮುದ್ವೇಷ ಅಳಿಸಿ ಸೌಹಾರ್ದತೆ ಉಳಿಸಿ’ ರ‍್ಯಾಲಿ ನಡೆಯಿತು.

ಇಲ್ಲಿನ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆರ‍್ಯಾಲಿ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ, ವಿಶ್ವಕವಿ ಕುವೆಂಪು ಹೇಳುವ ಹಾಗೆ ಮಗು ಹುಟ್ಟುತ್ತಲೇ ವಿಶ್ವಮಾನವನಾಗಿ ಹುಟ್ಟುತ್ತದೆ ಆದರೆ, ನಾವು ಅದಕ್ಕೆ ಜಾತಿಧರ್ಮದ ಕಲ್ಮಶ ಅಂಟಿಸುತ್ತಾ ಸಂಕುಚಿತನನ್ನಾಗಿ ಮಾಡುತ್ತೇವೆ ಎಂದರು.

ADVERTISEMENT

ಕಳೆದ ಕೆಲವು ತಿಂಗಳಿಂದ ಕರ್ನಾಟಕದಲ್ಲಿ ಜಂಗಲ್ ರಾಜ್ ತಲೆ ಎತ್ತಿದಂತೆ ಕಾಣುತ್ತದೆ. ಬಿಸಿ ಊಟದಲ್ಲಿ ತತ್ತಿ ಕೊಡುವ ಸಂದರ್ಭದಿಂದ ಆರಂಭವಾದ ಗಲಭೆಗಳೂ ಇಲ್ಲಿಯವರೆಗೂ ಒಂದಲ್ಲ ಒಂದು ರೀತೀತಿಯ ಆಶಾಂತಿಯ, ದ್ವೇಷದ, ಕೋಮುಭಾವನೆ ಪ್ರಚೊದಿಸುವ ಘಟನೆಗಳು ನಡೆಯುತ್ತಿವೆ. ಅಲ್ಪ ಸಂಖ್ಯಾತರ ಮೇಲೆ ದಾಳಿ ಸಾಮನ್ಯವಾಗಿವೆ. ರಾಜ್ಯ ಸರ್ಕಾರ ಕೂಡಲೇ ಎಚ್ಚುತ್ತುಕೊಂಡು ಅಪರಾಧಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜನತೆಗೆ ನೆಮ್ಮದಿಯ ಬದುಕನ್ನು ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.

ಬೀದಿ ವ್ಯಾಪಾರಸ್ಥರ ಮೇಲೆ ಹಲ್ಲೆ ಮಾಡುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಈ ದೇಶದಲ್ಲಿ ಹಿಂದೂ ಮುಸ್ಲಿಂ ಎಂಬ ಬೇಧಭಾವ ಜನಸಾಮಾನ್ಯರಲ್ಲಿ ಇಲ್ಲ ಇದನ್ನು ನಮ್ಮನ್ನಾಳುವ ರಾಜಕೀಯ ಪಕ್ಷಗಳು ಸೃಷ್ಠಿಮಾಡುತ್ತಿವೆ. ನಾವು ಈ ಪಕ್ಷಗಳ ಕುತಂತ್ರವನ್ನು ಸೋಲಿಸುತ್ತಾ ಐಕ್ಯದಿಂದಿರಬೇಕು ಎಂದರು.

ವಿಜಯಪುರ ಜಿಲ್ಲೆ ಕೋಮು ಸೌಹರ್ದತೆಗೆ ಹೆಸರುವಾಸಿಯಾದ ಜಿಲ್ಲೆ ಇದು ಶರಣರು, ಸೂಫಿ ಸಂತರ ನಾಡು ಇಲ್ಲಿನ ಎಲ್ಲ ಜನತೆ ಕೋಮು ಸೌಹಾರ್ದತೆ ಕಾಪಾಡುತ್ತಾ ಐಕ್ಯತೆಯನ್ನುಳಿಸಿಕೊಂಡು ಜನಗಳ ಸಮಸ್ಯೆಗಳ ವಿರುದ್ದ ಹೋರಾಡುವಂತೆ ಕರೆ ನೀಡಿದರು.

ವೇದಿಕೆಯ ಅಧ್ಯಕ್ಷರಾದ ಭೀಮಶಿ ಕಲಾದಗಿ, ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ, ಫೆಡಿನಾ ಸಂಸ್ಥೆಯ ಪ್ರಭುಗೌಡ ಪಾಟೀಲ, ಸ್ಲಂ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಅಕ್ರಮ್‌ ಮಾಶ್ಯಾಳಕರ, ರೈತ ಮುಖಂಡ ಬಾಳು ಜೇವೂರ, ವಕೀಲರಾದ ತಿಪ್ಪಣ್ಣ ದೊಡಮನಿ, ಘೋರ್ಪಡೆ, ಲಕ್ಮಣ ಹಂದ್ರಾಳ, ಎ.ಐ.ಡಿ.ವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಇರ್ಫಾನ್ ಶೇಖ್, ಫಯಾಜ ಕಲಾದಗಿ, ತಿಪ್ಪರಾಯ ಹತ್ತರಕಿ, ಮಹಾದೇವ ಲಿಗಾಡೆ, ಎಚ್.ಟಿ.ಭರತಕುಮಾರ್‌ ಇದ್ದರು.

***

ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಲು ಇಡೀ ರಾಜ್ಯದಾದ್ಯಂತ ಸರ್ಕಾರವೇ ಕುಳಿತು ಕೋಮುಗಲಭೆ ಎಬ್ಬಿಸುತ್ತಿದೆ. ಇದಕ್ಕೆ ಜನತೆ ಸೊಪ್ಪುಹಾಕಬಾರದು

–ಭೀಮಶಿ ಕಲಾದಗಿ,ಅಧ್ಯಕ್ಷ,ಪ್ರಗತಿಪರ ಸಂಘಟನೆಗಳ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.