ADVERTISEMENT

ವಿಜಯಪುರ | ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ; ಯಶಸ್ವಿ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 12:55 IST
Last Updated 16 ಜೂನ್ 2021, 12:55 IST
ಗೋವಿಂದ ರೆಡ್ಡಿ
ಗೋವಿಂದ ರೆಡ್ಡಿ   

ವಿಜಯಪುರ: ರಾಜ್ಯದಲ್ಲಿ ‘ಟ್ಯಾಂಕರ್ ಜಿಲ್ಲೆ’ ಎಂದು ಗುರುತಿಸಲಾಗುತ್ತಿದ್ದ ವಿಜಯಪುರ ಜಿಲ್ಲೆಯಲ್ಲಿ ಈ ಬೇಸಿಗೆಯ ಅವಧಿಯಲ್ಲಿ ಯಾವುದೇ ಟ್ಯಾಂಕರ್ ಬಳಸದೇ ಹಾಗೂ ಯಾವುದೇ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯದೇ ಕುಡಿಯುವ ನೀರಿನ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಮೇಲಾಧಿಕಾರಿಗಳ ಸಹಕಾರ, ಮಾರ್ಗದರ್ಶನ ಮತ್ತು ಉತ್ತಮ ಮಳೆಯಿಂದಾಗಿ ಕುಡಿಯುವ ನೀರನ್ನು ಉಪಯೋಗಿಸಿಕೊಳ್ಳುವ ಕೆರೆಗಳನ್ನು ಕಾಲಕಾಲಕ್ಕೆ ತುಂಬಿಸಿಕೊಂಡ ಪರಿಣಾಮ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿಲ್ಲ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಇಲಾಖೆ ಎಂಜಿನಿಯರ್‌ ಸಕಾಲದಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿರುವುದರಿಂದ ಈ ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಬೇಡಿಕೆ ಬಂದಿಲ್ಲ ಎಂದರು.

ADVERTISEMENT

ಈ ಮೊದಲು ಗ್ರಾಮೀಣ ಭಾಗಗಳಲ್ಲಿ ಫೆಬ್ರುವರಿಯಿಂದಲೇ ಟ್ಯಾಂಕರ್ ನೀರಿಗೆ ಬೇಡಿಕೆ ಬರುತ್ತಿತ್ತು. ಟ್ಯಾಂಕರ್ ನೀರು ಸರಬರಾಜು ಆಗುತ್ತಿದ್ದ ಗ್ರಾಮಗಳನ್ನು ಪಟ್ಟಿ ಮಾಡಿ, ಕಾರಣಗಳನ್ನು ಪತ್ತೆ ಹಚ್ಚಿ, ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವರ್ಷಾರಂಭದಿಂದಲೇ ಕೈಗೊಂಡಿದ್ದರಿಂದ ಬೇಸಿಗೆಯಲ್ಲಿ ಯಶಸ್ವಿಯಾಗಿ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.

ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದ್ದ ಹಳ್ಳಿಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿ ಪೈಪ್‌ಲೈನ್ ಅಳವಡಿಸಲಾಯಿತು. ಬಾವಿಯಂತಹ ಹೊಸ ಕುಡಿಯುವ ನೀರಿನ ಮೂಲಗಳನ್ನು ಹುಡುಕಿ ಫ್ಲಶಿಂಗ್ ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 1035 ಜನವಸತಿಗಳಿದ್ದು, 39 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಮತ್ತು 1496 ಏಕಗ್ರಾಮ ಕುಡಿಯುವ ನೀರಿನ ಯೋಜನೆಗಳು ಚಾಲ್ತಿಯಲ್ಲಿವೆ ಎಂದರು.

ಜಿಲ್ಲೆಯಲ್ಲಿ 39 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಿಂದ ಕುಡಿಯುವ ನೀರನ್ನು 615 ಜನವಸತಿಗಳಿಗೆ ಪೂರೈಸಲಾಗುತ್ತಿದೆ. 17 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಕೆರೆಗಳಿಂದ 296 ಜನವಸತಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಹೇಳಿದರು.

22 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಆಲಮಟ್ಟಿ, ನಾರಾಯಣಪುರ ಆಣೆಕಟ್ಟುಗಳ ಹಿನ್ನೀರಿನಿಂದ ಮತ್ತು ಭೀಮಾ ನದಿಯಿಂದ ನೀರನ್ನು ಪಡೆದು ಶುದ್ಧೀಕರಿಸಿ 319 ಜನವಸತಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯ್ತಿಗಳು ತಮ್ಮ 15ನೇ ಹಣಕಾಸಿನ ಅನುದಾನದಲ್ಲಿ ರಿಪೇರಿ ಕೆಲಸಗಳು, ಮೋಟಾರ್‌ ಅಳವಡಿಸುವಿಕೆ, ಪೈಪ್‌ಲೈನ್ ದುರಸ್ತಿ ಹಾಗೂ ಬೋರವೆಲ್ ಕೊರೆಯಿಸುವ ಕಾಮಗಾರಿಗಳನ್ನು ತಮ್ಮ ಹಂತದಲ್ಲಿಯೇ ನೆರವೇರಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿಯೇ ಪರಿಹರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 1496 ಏಕ ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಗ್ರಾಮ ಪಂಚಾಯ್ತಿಯವರು ಯಶಸ್ವಿಯಾಗಿ ತಮ್ಮ 15ನೇ ಹಣಕಾಸಿನಲ್ಲಿ ನಿರ್ವಹಿಸಿದ್ದಾರೆ. ಗ್ರಾಮ ಪಂಚಾಯತಿಯೊಂದಿಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಮನ್ವಯತೆಯಿಂದ ಕುಡಿಯುವ ನೀರಿನ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲಿಯೇ ಪರಿಹರಿಸಲಾಗಿದೆ ಎಂದು ಹೇಳಿದರು.

ಟ್ಯಾಂಕರ್‌ ನೀರು; ಖರ್ಚಿನ ವಿವರ

2016 -17 ನೇ ಸಾಲಿನಲ್ಲಿ 166 ಗ್ರಾಮಗಳಿಗೆ 717 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ₹ 11,89 ಕೋಟಿ ಖರ್ಚಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

2017 -18 ನೇ ಸಾಲಿನಲ್ಲಿ 67 ಗ್ರಾಮಗಳಿಗೆ 211 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ₹ 17 ಕೋಟಿ ಖರ್ಚಾಗಿದೆ ಎಂದರು.

2018 -19 ನೇ ಸಾಲಿನಲ್ಲಿ 133 ಗ್ರಾಮಗಳಿಗೆ 2759 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ₹11,76 ಕೋಟಿ ಖರ್ಚಾಗಿದೆ ಎಂದರು.

2019-20 ನೇ ಸಾಲಿನಲ್ಲಿ 154 ಗ್ರಾಮಗಳಿಗೆ 563 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ₹9,13 ಕೋಟಿ ಖರ್ಚಾಗಿದೆ ಎಂದರು.

2020-21ನೇ ಸಾಲಿನಲ್ಲಿ 12 ಗ್ರಾಮಗಳಿಗೆ 36 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದ್ದು, ₹ 56 ಲಕ್ಷ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

ಉತ್ತಮ ಮುಂಗಾರು ಮಳೆ ಹಾಗೂ ಆಣೆಕಟ್ಟುಗಳಿಂದ ಕೆರೆಗಳನ್ನು ಕಾಲಕಾಲಕ್ಕೆ ತುಂಬಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಸುಧಾರಣೆಯಾಗಿದೆ
–ಗೋವಿಂದ ರೆಡ್ಡಿ, ಸಿಇಒ,ಜಿಲ್ಲಾ ಪಂಚಾಯ್ತಿ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.