ADVERTISEMENT

ಯತ್ನಾಳ ಭೂ ಕಬಳಿಕೆ ಆರೋಪ ನಿರಾಧಾರ

ಸಿದ್ಧೇಶ್ವರ ಸಂಸ್ಥೆಯ ಚೇರ್‌ಮನ್‍ ಬಸಯ್ಯ ಎಸ್. ಹಿರೇಮಠ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 12:03 IST
Last Updated 20 ಜನವರಿ 2021, 12:03 IST

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂ ಕಬಳಿಕೆ ಮಾಡಿದ್ದಾರೆ ಎಂಬಆರ್‌.ಟಿ.ಐ ಕಾರ್ಯಕರ್ತರಾದ ಸನ್ನಿ ಗವಿಮಠ ಮತ್ತು ಅಬ್ಧುಲ್ ಹಮೀದ್‌ ಇನಾಮದಾರ ಅವರ ಆರೋಪ ನಿರಾಧಾರವಾಗಿದೆ ಎಂದುಸಿದ್ದೇಶ್ವರ ಸಂಸ್ಥೆಯಚೇರ್‌ಮನ್‍ ಬಸಯ್ಯ ಎಸ್. ಹಿರೇಮಠ ತಿಳಿಸಿದ್ದಾರೆ.

ನಗರದ ಅಥಣಿ ರಸ್ತೆಯ ಕೋರ್ಟ್‌ ಕಾಲೊನಿಯಲ್ಲಿ ಉದ್ಯಾನಕ್ಕೆ ಮೀಸಲಿಡಲಾದ ಸರ್ವೇ ನಂಬರ್ 688/ಬ, ಪ್ಲಾಟ್‌ ನಂಬರ್-99 ಇದನ್ನು ಶಾಸಕರು ಅತಿಕ್ರಮಣ ಮಾಡಿ, ಅಟಲ್‍ಬಿಹಾರಿ ವಾಜಪೇಯಿ ಶಾಲೆ ಕಟ್ಟಡ ನಿರ್ಮಿಸಿದ್ದಾರೆ ಎಂಬುದು ಶುದ್ದ ಸುಳ್ಳು ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ವಿಜಯಪುರನಗರಾಭಿವೃದ್ಧಿ ಪ್ರಾಧಿಕಾರವು ನಗರದ 25 ಆಸ್ತಿಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ, ಶಿಕ್ಷಣ ಸಲುವಾಗಿ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡುವುದಾಗಿ 2017ರಲ್ಲಿ ಪ್ರಕಟಣೆ ಹೊರಡಿಸಿತ್ತು. ಈ ಪ್ರಕಟಣೆ ಆಧಾರದ ಮೇಲೆ ಸಿದ್ದೇಶ್ವರ ಸಂಸ್ಥೆಯು ₹7,85,480ಠೇವಣಿಯೊಂದಿಗೆಅರ್ಜಿ ಸಲ್ಲಿಸಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

2017 ಡಿಸೆಂಬರ್‌ 12ರಂದು ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಸರ್ವೆ ನಂಬರ್ 688/2 ಕ್ಷೇತ್ರ 3650 ಚ.ಮೀ ಜಾಗವನ್ನು ಸಿದ್ಧೇಶ್ವರ ಸಂಸ್ಥೆಗೆ ಶೈಕ್ಷಣಿಕ ಉದ್ದೇಶ ಸಲುವಾಗಿ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸಂಸ್ಥೆಗೆ ಜಾಗ ಮಂಜೂರಾದ ಬಳಿಕ ₹ 39,27,400ಗುತ್ತಿಗೆ ಹಣವನ್ನು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂದಾಯ ಮಾಡಿ, ನೋಂದಾಣಿ ಮಾಡಿಕೊಳ್ಳಲಾಗಿದೆ. ಆ ಜಾಗದಲ್ಲಿ ಅಟಲ್‍ಬಿಹಾರಿ ವಾಜಪೇಯಿ ಹೆಸರಿನಲ್ಲಿ ಶಾಲೆ ಕಟ್ಟಡ ನಿರ್ಮಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಟಿಐ ಕಾರ್ಯಕರ್ತರು ತಿಳಿಸಿರುವಸರ್ವೆ ನಂಬರ್-688/ಬ, ಪ್ಲಾಟ್‌ ನಂಬರ್-99 ಜಾಗವು ಸಿದ್ಧೇಶ್ವರ ಸಂಸ್ಥೆಗೆ ಸಂಬಂಧಿಸಿರುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಸುಳ್ಳು ಆಪಾದನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ಸುಳ್ಳು ಆಪಾದನೆ ಮಾಡಿರುವ ಆರ್‌ಟಿಐ ಕಾರ್ಯಕರ್ತರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.