ADVERTISEMENT

ಅತಿವೃಷ್ಟಿಯಿಂದ ಬೆಳೆನಷ್ಟ: ಕನಿಷ್ಠ 50 ಸಾವಿರ ಪರಿಹಾರಕ್ಕೆ ಒತ್ತಾಯ

ಬೆಳೆಹಾನಿ: ಸಿಂದಗಿಯಲ್ಲಿ ರೈತ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 2:33 IST
Last Updated 28 ಅಕ್ಟೋಬರ್ 2020, 2:33 IST
ಸಿಂದಗಿಯ ಮಿನಿವಿಧಾನಸೌಧ ಎದುರು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು
ಸಿಂದಗಿಯ ಮಿನಿವಿಧಾನಸೌಧ ಎದುರು ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು   

ಸಿಂದಗಿ: ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿರುವ ವಿಜಯಪುರ ಜಿಲ್ಲೆಯ ಎಲ್ಲ ರೈತರಿಗೂ ತಲಾ ಕನಿಷ್ಠ ₹ 50 ಸಾವಿರ ಪರಿಹಾರ ತಕ್ಷಣವೇ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ಮಂಗಳವಾರ ಪಟ್ಟಣದ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ, ಸಿದ್ದು ಯಾಳಗಿ, ಶಿವನಗೌಡ ಬಿರಾದಾರ ಮಾತನಾಡಿ, ಸಂಕಷ್ಟದಲ್ಲಿರುವ ರಾಜ್ಯದ ಎಲ್ಲ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. 2018-19ನೇ ಸಾಲಿನ ಲಿಂಬೆ ಪುನ:ಶ್ಚೇತನ ಫಲಾನುಭವಿಗಳಿಗೆ ಘೋಷಣೆಯಾದ ಪರಿಹಾರದಲ್ಲಿ ಬಾಕಿ ಉಳಿದಿರುವ ₹ 2 ಕೋಟಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಗೊಳಿಸುವ ಪೂರ್ವದಲ್ಲಿಯೇ ರೈತರ ಕಬ್ಬು ಬೆಳೆಗೆ ದರ ನಿಗದಿಪಡಿಸಬೇಕು. ರೈತರ ಹಿಂದಿನ ಸಾಲವನ್ನು ಮನ್ನಾ ಮಾಡಿ ಮತ್ತೆ ಹೊಸ ಸಾಲ ನೀಡಬೇಕು. ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಹಣ ಪಾವತಿಯನ್ನು ಆರು ತಿಂಗಳಾದರೂ ಪಾವತಿಸುವುದಿಲ್ಲ. ಹೀಗಾಗಿ ಈ ಹಣವನ್ನು 15 ದಿನಗಳೊಳಗಾಗಿ ರೈತರಿಗೆ ಪಾವತಿಸಬೇಕು ಎಂಬ ಬೇಡಿಕೆಯನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ರೈತ ಸಂಘದ
ಪ್ರಮುಖರು ಸಲ್ಲಿಸಿದರು.

ADVERTISEMENT

ಜೆ.ಎಲ್.ಶಾಬಾದಿ, ಮಂಜು ದೇವರಮನಿ, ಬಸವರಾಜ ಹಳ್ಳಿ, ಜಟ್ಟೆಪ್ಪ ಹೊಸಮನಿ, ಈರಣ್ಣ ಭಜಂತ್ರಿ, ಸಂಗಣ್ಣ ಇಂಚಗೇರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.