ವಿಜಯಪುರ: ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹೊರಬಿಟ್ಟ ಪರಿಣಾಮನಿಡಗುಂದಿ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಒಟ್ಟು 15 ಗ್ರಾಮಗಳ ಒಟ್ಟು 1,006 ಹೆಕ್ಟೇರ್ ಪ್ರದೇಶದ ಬೆಳೆಯು ಜಲಾವೃತವಾಗಿ, ಅಂದಾಜು ₹ 10.43 ಕೋಟಿ ಬೆಳೆಯು ಹಾನಿಗೀಡಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ನಿಡಗುಂದಿ ತಾಲ್ಲೂಕಿನ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಭೂದಿಹಾಳ ಪಿ.ಎನ್, ಮಸೂತಿ ಮತ್ತು ವಡವಡಗಿ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಕಮಲದಿನ್ನಿ, ಗಂಗೂರ, ದೇವೂರ, ನಾಗರಾಳ, ಕಾಳಗಿ, ಕುಂಚಗನೂರು, ತಂಗಡಗಿ ದೇವೂರು ಮತ್ತು ಹಂಡರಗಲ್ ಸೇರಿದಂತೆ ಒಟ್ಟು 15 ಗ್ರಾಮಗಳ ಕೃಷಿ ಜಮೀನು ಜಲಾವೃತವಾಗಿದ್ದವು ಎಂದು ಅವರು ಹೇಳಿದ್ದಾರೆ.
ಒಂದು ವಾರದ ಈಚೆಗೆ ಆಲಮಟ್ಟಿ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಒಟ್ಟು 85 ಮನೆಗಳಿಗೆ ಹಾನಿಗೆ ಒಳಗಾಗಿದ್ದು, ಅರ್ಹ ಎಲ್ಲ ಮನೆಗಳಿಗೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನುಸಾರ ಪರಿಹಾರ ಧನ ನೀಡಲಾಗಿದೆ. ಮಾನವ ಜೀವಹಾನಿಯ ಒಟ್ಟು 11 ಪ್ರಕರಣಗಳಲ್ಲಿ ತಲಾ ₹5 ಲಕ್ಷದಂತೆ ಪರಿಹಾರ ಧನವನ್ನು ನೀಡಲಾಗಿದೆ ಎಂದು ತಿಳಿಸಿದರು.
ಜಾನುವಾರು ಜೀವಹಾನಿಯ ಒಟ್ಟು 37 ಪ್ರಕರಣಗಳಲ್ಲಿ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನುಸಾರ ₹ 7.92 ಲಕ್ಷ ಪರಿಹಾರ ಧನವನ್ನು ನೀಡಲಾಗಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದಾಗಿ ಮೂಲಭೂತ ಸೌಕರ್ಯಗಳ ಪ್ರವಾಹ ಹಾನಿಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
***
ಬೆಳೆ ಹಾನಿಯಾದ ರೈತರಿಗೆ ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿಯ ಮಾಹಿತಿಯನ್ನು ನಮೂದಿಸಿ, ಪರಿಹಾರ ಧನವನ್ನು ವಿತರಿಸಲಾಗುವುದು
ಪಿ.ಸುನೀಲ್ಕುಮಾರ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.