ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಕಾರ್ಯಕರ್ತರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 14:07 IST
Last Updated 23 ಜೂನ್ 2023, 14:07 IST
ವಿಜಯಪುರದಲ್ಲಿ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಸಚಿವ ಶಿವಾನಂದ ಪಾಟೀಲ ಅವರಿಗೆ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು
ವಿಜಯಪುರದಲ್ಲಿ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಸಚಿವ ಶಿವಾನಂದ ಪಾಟೀಲ ಅವರಿಗೆ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು   

ವಿಜಯಪುರ: ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳಿಂದ ಡಿಸೆಂಬರ್‌ ತಿಂಗಳಿಂದ ಈವರೆಗೆ ರೈತರಿಗೆ ಕಬ್ಬಿನ ಬಾಕಿ ಹಣ ಬಾರದ್ದರಿಂದ ತೊಂದರೆ ಅನುಭವಿಸುವಂತಾಗಿದ್ದು, ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳಿಂದ ರೈತರ ಬಾಕಿ ಬಿಲ್‌ ಕೊಡಿಸುವಂತೆ ಆಗ್ರಹಿಸಿ ಸಚಿವ ಶಿವಾನಂದ ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು. 

ಜೂನ್‌ ತಿಂಗಳು ಮುಗಿಯುತ್ತಾ ಬಂದರೂ ಮಳೆ ಆಗದೇ ಸಾಲ ಮಾಡಿ ಬೀಜ ಗೊಬ್ಬರವನ್ನು ತಂದು ಬಿತ್ತನೆ ಮಾಡಿದ್ದಾರೆ. ಕಳೆದ 2-3 ವರ್ಷಗಳಿಂದ ಫಸಲ್ ಭೀಮಾ ಯೋಜನೆಯ ವಿಮಾ ಹಣವೂ ಸಹ ರೈತರಿಗೆ ಬಂದಿಲ್ಲ. ಈ ಕುರಿತು ಸಮಗ್ರವಾಗಿ ವಿಚಾರಣೆ ನಡೆಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲೆ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿತ ರೈತ ಭವನ ನಿರ್ಮಿಸಬೇಕು ಹಾಗೂ ಹಳೆಯ ರೈತಭವನ ಆಧುನಿಕರಿಸಬೇಕು, ಸರ್ಕಾರದ ಮಾರ್ಗಸೂಚಿಗಿಂತ ಅಧಿಕ ಕಮಿಷನ್ ಪಡೆಯುತ್ತಿರುವ ಎ.ಪಿ.ಎಂ.ಸಿ ವರ್ತಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಜಯಪುರ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಿಸಿ ಪರಿಹಾರ ಕೊಡಬೇಕು. ನೂತನ ತಾಲ್ಲೂಕುಗಳಲ್ಲಿ ಎಲ್ಲಾ ಕಚೇರಿಗಳನ್ನು ಪ್ರಾರಂಭಿಸಬೇಕು. ರೈತರ ಜಮೀನುಗಳ ರಸ್ತೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ, ತಹಶೀಲ್ದಾರ್‌, ತಲಾಟಿಗಳಿಗೆ ಸಂಪೂರ್ಣ ಅಧಿಕಾರ ನೀಡಿ, ಸ್ಥಳ ಪರಿಶೀಲಿಸಿ, ಎಲ್ಲಾ ಜಮೀನಿನ ಉತ್ತಾರೆಗಳಲ್ಲಿ ರಸ್ತೆ ನಕಾಶೆ ಕಡ್ಡಾಯವಾಗಿ ಮುದ್ರಿಸುವಂತೆ ಸರ್ಕಾರದ ಮಟ್ಟದಲ್ಲಿ ಗೆಜೆಟ್ ಪಾಸ್ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಮಗೌಡ ಪಾಟೀಲ, ವಿರೇಶ ಗೊಬ್ಬುರ, ಸಾತಲಿಂಗಯ್ಯ ಸಾಲಿಮಠ, ನಜೀರ ನಂದರಗಿ, ಪ್ರತಾಪ ನಾಗರಗೋಜಿ, ಶಾನೂರ ನಂದರಗಿ, ರೇಖಾ ಪಾಟೀಲ, ವಿಜಯಲಕ್ಷ್ಮೀ ಗಾಯಕವಾಡ, ಸವಿತಾ ವಾಲಿಕರ, ಬಿ.ಬಿ. ಆಯಿಷಾ, ಸಲ್ಮಾ ಜಮಖಾನಿವಾಲಾ, ಮಹದೇವಪ್ಪ ತೇಲಿ, ಅರುಣಕುಮಾರ ತೇರದಾಳ, ದಾವಲಸಾಬ ನಂದರಗಿ, ಶ್ರೀಶೈಲ ವಾಲಿಕಾರೆ, ರಿಯಾಜ ವಾಲಿಕಾರ, ಜಯರುದ್ದಿನ ಮುಲ್ಲಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.