ADVERTISEMENT

‘ಅಭಿವ್ಯಕ್ತಿ ಸ್ವಾತಂತ್ರ: ಭಾರತ ಮುಂಚೂಣಿ’

‘ಪ್ರಜಾವಾಣಿ’ ಅಮೃತ ಮಹೋತ್ಸವ; ಪತ್ರಿಕಾ ಏಜೆಂಟರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:37 IST
Last Updated 25 ನವೆಂಬರ್ 2022, 14:37 IST
ವಿಜಯಪುರ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಏಜೆಂಟರಿಗೆ ಸನ್ಮಾಸಲಾಯಿತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದೊಂದಿಗೆ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕಾ ಏಜೆಂಟರಿಗೆ ಸನ್ಮಾಸಲಾಯಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ‘ಅಭಿವ್ಯಕ್ತಿ ಸ್ವಾತಂತ್ರ ಕಲ್ಪಿಸುವಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತ ಭಾರತ ಮುಂಚೂಣಿಯಲ್ಲಿದೆ’ ಎಂದುದರಬಾರ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ವಿಕಾಸ ದರಬಾರ ಅಭಿಪ್ರಾಯಪಟ್ಟರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ನಗರದವಿದ್ಯಾವರ್ಧಕ ಸಂಘದ ಕಲಾ, ವಾಣಿಜ್ಯ ಮತ್ತು ಬಿ.ಸಿ.ಎ(ದರಬಾರ)ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಹಾಗೂ ಪತ್ರಿಕಾ ಏಜೆಂಟರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಗೆ ಪೂರಕವಾದ ಹಾಗೂ ಜನಪರವಾದ ವರದಿಗಳಿಗೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ವಿಜಯಪುರದಲ್ಲಿದರಬಾರ ಶಿಕ್ಷಣ ಸಂಸ್ಥೆಯು ಸ್ವಾತಂತ್ರ್ಯ ಪೂರ್ವದಿಂದ ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡು ಸ್ನಾತಕೋತ್ತರದ ವರೆಗೂಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪ್ರಸಿದ್ಧಿ ಗಳಿಸಿದೆ. ನಾಡಿನ ಹಲವು ಪ್ರತಿಭಾನ್ವಿತರು ನಮ್ಮ ಶಿಕ್ಷಣ ಸಂಸ್ಥೆಯಿಂದ ರೂಪುಗೊಂಡಿದ್ದಾರೆ’ ಎಂದು ಹೇಳಿದರು.

ಪ್ರಾಧ್ಯಾಪಕ ಜಗದೀಶ ಸಾತಿಹಾಳ ಮಾತನಾಡಿ, ‘ಪ್ರಜಾವಾಣಿ ಕನ್ನಡಿಗರ ಮತ್ತು ಕರ್ನಾಟಕದ ಸರ್ವಶ್ರೇಷ್ಠ ಪತ್ರಿಕೆಯಾಗಿದೆ. ಪತ್ರಿಕೆಯು ವಸ್ತುನಿಷ್ಠ ವರದಿ, ವಿಶ್ಲೇಷಣೆಯಿಂದ ಮನೆಮಾತಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಪ್ರಜಾವಾಣಿಯನ್ನು ಓದಿದರೆ ಯಶಸ್ಸು ನಿಶ್ಚಿತ’ ಎಂದು ಹೇಳಿದರು.

ಇತಿಹಾಸ ಪ್ರಾಧ್ಯಾಪಕ ಗುರುರಾಜ ಬೊಮ್ಮನಹಳ್ಳಿ ಮಾತನಾಡಿ, ‘ಪ್ರಜಾವಾಣಿಯನ್ನು ನಿತ್ಯ ಓದುವ ಓದುಗರು ಕೂಡ ಅದರ ವಸ್ತುನಿಷ್ಠ ಬರಹಳಗಳಿಂದ ಪ್ರೇರಿತರಾಗಿ ಅದೇ ಮನಸ್ಥಿತಿಯವರಾಗಿ ರೂಪುಗೊಳ್ಳುತ್ತಾರೆ. ಅಂತಹ ಸಂಸ್ಕೃತಿಯನ್ನು ಪ್ರಜಾವಾಣಿ ಬೆಳೆಸುವ ಶಕ್ತಿ ಹೊಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಜನಪರ, ನಿರ್ಭೀತ ಪತ್ರಿಕೋದ್ಯಮಕ್ಕೆ ಮತ್ತೊಂದು ಹೆಸರು ಪ್ರಜಾವಾಣಿ ಎನ್ನಬಹುದಾಗಿದೆ. ಸಾಮಾಜಿಕ ಜಾಲತಾಣ, ಸುದ್ದಿ ಮಾಧ್ಯಮಗಳ ಭರಾಟೆಯಲ್ಲೂ ಪ್ರಜಾವಾಣಿ ಇಂದಿಗೂ ಜನಪರ ನಿಲುವನ್ನು ಉಳಿಸಿಕೊಂಡು ಬರುತ್ತಿರುವುದು’ ಶ್ಲಾಘನೀಯ ಎಂದರು.

‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥರಾದ ರಶ್ಮಿ ಎಸ್‌. ಅವರು ‘ಮುದ್ರಣ ಮಾಧ್ಯಮದ ಸವಾಲುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಪತ್ರಿಕಾ ಏಜೆಂಟರಿಗೆ ಸನ್ಮಾನ:

ವಿಜಯಪುರ ನಗರದ ಪತ್ರಿಕಾ ಏಜೆಂಟರಾದ ಸುರೇಶ ಕಲಾದಗಿ ಮತ್ತು ಶಿವಾನಂದ ಹೂಗಾರ ಹಾಗೂ ಕೊಲ್ಹಾರದ ಗಿರೀಶ ಗಣಿ ಅವರನ್ನು‘ಪ್ರಜಾವಾಣಿ’ ಪತ್ರಿಕೆ ವತಿಯಿಂದ ಸನ್ಮಾನಿಸಲಾಯಿತು.

ಉಪ ಪ್ರಾಂಶುಪಾಲ ಎಂ.ಎಚ್‌.ಕೋಟ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್‌.ಬಿ.ಕುಂಬಾರ, ರಮೇಶ ಕೋಟ್ಯಾಳ, ಅಕ್ಷತಾ ಪಾಟೀಲ, ಕಾಶಿನಾಥ ಕೋಣಣ್ಣವರ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ವಿದ್ಯಾಶ್ರೀ ಗಾಣಿಗೇರ ಸ್ವಾಗತಿಸಿದರು. ವಾಸವಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.