ADVERTISEMENT

ಸರ್ಕಾರಿ ಶಿಕ್ಷಣ ನೀತಿಗಿಲ್ಲ ವೈಜ್ಞಾನಿಕ ತಳಹದಿ: ಪ್ರೊ.ಅರವಿಂದ ಮನಗೂಳಿ

ರಾಜ್ಯಮಟ್ಟದ ಶಿಕ್ಷಣಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನ: ಪ್ರೊ.ಅರವಿಂದ ಮನಗೂಳಿ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:08 IST
Last Updated 28 ಡಿಸೆಂಬರ್ 2025, 5:08 IST
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ನಡೆದ 15ನೇ ರಾಜ್ಯಮಟ್ಟದ ಶಿಕ್ಷಣಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನವನ್ನು ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಸಿಂದಗಿ ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ನಡೆದ 15ನೇ ರಾಜ್ಯಮಟ್ಟದ ಶಿಕ್ಷಣಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನವನ್ನು ಪದ್ಮರಾಜ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಸಿಂದಗಿ: ‘ಸರ್ಕಾರ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದಂತೆ ದಿನಕ್ಕೊಂದು ಮಾರ್ಪಾಡುಗಳು, ವೈಜ್ಞಾನಿಕ ತಳಹದಿಯಿಲ್ಲದ ನಿಯಮಗಳು, ತೆಗೆದುಕೊಳ್ಳುವ ನಿರ್ಣಯಗಳು ಶೈಕ್ಷಣಿಕ ಅಭಿವೃದ್ಧಿಗೆ ತೊಡಕಾಗುತ್ತಿವೆ. ಜ್ಞಾನದ ಕೇಂದ್ರಗಳಾಗಬೇಕಾದ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮಾಹಿತಿ ಕೇಂದ್ರಗಳಾಗುತ್ತಿವೆ’ ಎಂದು ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದಿಂದ ಶನಿವಾರ ಆಯೋಜಿಸಿದ್ದ 15ನೇ ರಾಜ್ಯಮಟ್ಟದ ಶಿಕ್ಷಣಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣವನ್ನು ವ್ಯಕ್ತಿಗತಗೊಳಿಸುವ ಕೃತಕಬುದ್ದಿಮತ್ತೆ ಶೈಕ್ಷಣಿಕ ಕ್ಷೇತ್ರಕ್ಕೆ ಕಾಲಿಟ್ಟರೆ ಉಪನ್ಯಾಸಕರು ಮಾಹಿತಿದಾರರಾಗಿ ಉಳಿಯಬೇಕಾಗುತ್ತದೆ. ಶಿಕ್ಷಕರು ಯಂತ್ರಮಯವಾಗುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ಮರಳಿ ಚಾಕ್ ಮತ್ತು ಟಾಕ್ ಪದ್ದತಿಗೆ ಬರುವ ಹಂತದಲ್ಲಿದ್ದರೆ ನಮ್ಮ ರಾಷ್ಟ್ರ ಇನ್ನೂ ಮೆಕಾಲೆ ಶಿಕ್ಷಣ ಪದ್ಧತಿಯನ್ನೇ ಮುಂದುವರೆಸಿಕೊಂಡು ಹೊರಟಿದೆ. ಮೆಕಾಲೆ ಶಿಕ್ಷಣ ಪದ್ಧತಿ ಭಾರತೀಯ ಶಿಕ್ಷಣ ಪದ್ಧತಿಗೆ ಭಾರಿ ಪೆಟ್ಟುಕೊಟ್ಟಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನೊಳಗೊಂಡ ಶಿಕ್ಷಣ ಪದ್ಧತಿ ಅನುಷ್ಠಾನಗೊಳ್ಳದ ಹೊರೆತು ಶೈಕ್ಷಣಿಕ ವ್ಯವಸ್ಥೆ ಏಳ್ಗೆ ಕಾಣುವುದಿಲ್ಲ’ ಎಂದು ಖೇದ ವ್ಯಕ್ತಪಡಿಸಿದರು.

ADVERTISEMENT

‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಮರ್ಶಾತ್ಮಕ ಚಿಂತನೆ ಕಾಣುತ್ತಿಲ್ಲ. ವಿಶ್ವವಿದ್ಯಾಲಯ ಮಟ್ಟದ ಪ್ರಾಧ್ಯಾಪಕರ ಜ್ಞಾನ ಸಂಕುಚಿತಗೊಳ್ಳುತ್ತಿದೆ. ಕೇವಲ ಸೆಮಿನಾರ್, ಸಮ್ಮೇಳನದಂಥ ಚಟುವಟಿಕೆಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಬಹುತೇಕ ಪ್ರಾಧ್ಯಾಪಕರಲ್ಲಿ ಇರಬೇಕಾದ ಜ್ಞಾನದ ಗರ್ವ ಕಾಣುತ್ತಿಲ್ಲ. ಒಣ ಗರ್ವ ಹೆಚ್ಚುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ‘ಶಿಕ್ಷಣ ಕವಲುದಾರಿಯಲ್ಲಿದೆ. ದೇಶಿ ಶಿಕ್ಷಣ ಪದ್ಧತಿ ಮರುಕಳಿಸಬೇಕಾಗಿದೆ ಅದಕ್ಕೆ ಪೂರಕವಾಗಿ ಚಿಂತನ ಮಂಥನ ನಡೆಯಬೇಕಿದೆ. ಶಿಕ್ಷಣದಲ್ಲಿ ಅಂಕಗಳು ಹೆಚ್ಚಿವೆ. ಸಂಸ್ಕೃತಿ, ಸಂಸ್ಕಾರ ಕ್ಷೀಣಿಸಿದೆ. ವಿದ್ಯಾರ್ಥಿಗಳಲ್ಲಿ ಮೌಲಿಕ ವಿಚಾರಗಳನ್ನು ಬಿತ್ತಬೇಕಾದುದು ಅತ್ಯಗತ್ಯವಾಗಿದೆ’ ಎಂದು ಸಲಹೆ ನೀಡಿದರು.


ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ನಾಗರಾಜ್ ಮರೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಭಜಂತ್ರಿ ಉಪನ್ಯಾಸಕ ಸಿದ್ಧಲಿಂಗ ಕಿಣಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸಂಘದ ರಾಜ್ಯ ಘಟಕದ ಪದಾಧಿಕಾರಿಗಳಾದ ಎಸ್.ಬಿ.ಪಾಟೀಲ, ನಿರುಪಮಾ ನಾಯಕ, ಎಚ್.ಎಫ್.ನಾಯಕ, ವಿ.ಜಿ.ಹೂನಳ್ಳಿ ಇದ್ದರು.‌

ಪದವಿ ಪೂರ್ವ ಶಿಕ್ಷಣ ಇಲಾಖೆ ವಿಜಯಪುರ ಜಿಲ್ಲಾ ಉಪನಿರ್ದೇಶಕರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ಸಮ್ಮೇಳನ ಸಿಂದಗಿಯಲ್ಲಿ ಆಯೋಜನೆಯಾಗಿದ್ದರೂ ತಾವು ಗೈರು ಉಳಿದು ಇಂದೇ ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಪ್ರಾಚಾರ್ಯರ ಸಭೆಯನ್ನು ಉದ್ದೇಶಪೂರ್ವಕವಾಗಿ ನಡೆಸಿರುವುದು ಸರಿಯಲ್ಲ ಎಂಬ ಚರ್ಚೆ ಸಮ್ಮೇಳನದಲ್ಲಿ ಕೇಳಿ ಬಂದಿತು.

ಶೈಕ್ಷಣಿ ವ್ಯವಸ್ಥೆಯಲ್ಲಿ ಅಶಿಸ್ತಿನ ತಾಂಡವ

‘ಇಂದಿನ ಶೈಕ್ಷಣಿ ವ್ಯವಸ್ಥೆಯಲ್ಲಿ ಅಶಿಸ್ತು ತಾಂಡವವಾಡುತ್ತಿದೆ. ಶಿಕ್ಷಣದಲ್ಲಿ ಶಿಸ್ತು ಇರದಿದ್ದರೆ ಅಧೋಗತಿ. ಶಿಕ್ಷಣದ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಶಿಕ್ಷಣ ಮಂತ್ರಿಗಳು ಐ.ಎ.ಎಸ್ ಅಧಿಕಾರಿಗಳ ಕಪಿಮುಷ್ಠಿಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅನಕ್ಷರಸ್ಥ ಪದವೀಧರರು ಬಂದರೂ ಆಶ್ಚರ್ಯಪಡಬೇಕಿಲ್ಲ’ ಎಂದು ಸಾನ್ನಿಧ್ಯ ವಹಿಸಿದ್ದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಶಿಕ್ಷಣ ವ್ಯವಸ್ಥೆ ಕುರಿತಾಗಿ ಕಳವಳ ವ್ಯಕ್ತಪಡಿಸಿದರು. ‘ಅಂಕಗಳಿಗೆ ಪ್ರಾಶಸ್ತ್ಯ ಬೇಡ ಜ್ಞಾನಕ್ಕೆ ಪ್ರಾಶಸ್ತ್ಯ ಕೊಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.