ವಿಜಯಪುರ:‘ಯುವಕರಲ್ಲಿ ಉದಾತ್ತ ಆದರ್ಶ, ಹನುಮಂತನಲ್ಲಿದ್ದ ಸ್ವಾಮಿ ನಿಷ್ಠೆ, ದೇಶಭಕ್ತಿಯ ಗುಣವನ್ನು ಬೆಳೆಸುವ ಪ್ರತೀಕವಾಗಿ ವಿಜಯಪುರದ ಹನುಮಗಿರಿಯಲ್ಲಿ ಏ.19ರ ಶುಕ್ರವಾರ ಹನುಮದೀಕ್ಷಾ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದು ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಪಂ.ಸಂಜೀವಾಚಾರ್ಯ ಮದಬಾವಿ ತಿಳಿಸಿದರು.
‘ಹನುಮ ದೀಕ್ಷೆ ಪಡೆದವರ ಕೈಗೆ ಕೇಸರಿ, ಬಿಳಿ ಹಾಗೂ ಹಸಿರು ವರ್ಣದ ವಿಶೇಷ ದಾರವನ್ನು ಈ ಸಂದರ್ಭ ಕಟ್ಟಲಾಗುತ್ತದೆ’ ಎಂದು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಈಗಾಗಲೇ ನೂರಕ್ಕೂ ಹೆಚ್ಚು ಯುವಕರು ದೀಕ್ಷೆ ಪಡೆದುಕೊಳ್ಳಲು ಸಂಪರ್ಕ ಸಾಧಿಸಿದ್ದಾರೆ. 500ಕ್ಕೂ ಹೆಚ್ಚು ಯುವಕರಿಗೆ ದೀಕ್ಷೆ ನೀಡುವ ಗುರಿ ಹೊಂದಿದ್ದೇವೆ. ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲದೇ ಎಲ್ಲ ಯುವಕರಿಗೂ ದೀಕ್ಷೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಮಾತನಾಡಿದರು. ಗೋಪಾಲ ನಾಯಕ, ಪ್ರಮೋದ ಪುರಾಣಿಕ, ವಿಜಯ ಜೋಶಿ, ಪರಶುರಾಮ ಗುಮಾಸ್ತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.