ADVERTISEMENT

ಬಸವನಬಾಗೇವಾಡಿ: ಕೃಷಿಯಲ್ಲಿ ಖುಸಿ ಕಾಣುತ್ತಿರುವ ಐಟಿ ಉದ್ಯೋಗಿ

ಇಸ್ರೇಲ್ ತಂತ್ರಜ್ಞಾನದೊಂದಿಗೆ ಸಾವಯವ ಕೃಷಿ

ಪ್ರಕಾಶ ಮಸಬಿನಾಳ
Published 12 ಜನವರಿ 2023, 19:30 IST
Last Updated 12 ಜನವರಿ 2023, 19:30 IST
ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ಗಿರೀಶ ತೋಟಗಿ ಅವರ ಹೊಲದಲ್ಲಿ ಬೆಳೆದು ನಿಂತಿರುವ ಬ್ಯಾಡಗಿ ಮೆಣಸಿನ ಗಿಡಗಳು
ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ಗಿರೀಶ ತೋಟಗಿ ಅವರ ಹೊಲದಲ್ಲಿ ಬೆಳೆದು ನಿಂತಿರುವ ಬ್ಯಾಡಗಿ ಮೆಣಸಿನ ಗಿಡಗಳು   

ಬಸವನಬಾಗೇವಾಡಿ: ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಐಟಿ ಕಂಪನಿ ಉದ್ಯೋಗಿಯಾಗಿದ್ದ ತಾಲ್ಲೂಕಿನ ಮುತ್ತಗಿ ಗ್ರಾಮದ ಗಿರೀಶ ತೋಟಗಿ (ಮಾಳಜಿ) ಅವರು ಉದ್ಯೋಗ ತೋರೆದು ಕಳೆದ ನಾಲ್ಕು ವರ್ಷದಿಂದ ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಉತ್ತಮ ಫಸಲು ತೆಗೆಯುತ್ತಿದ್ದಾರೆ.

ತಮ್ಮ ಏಳು ಎಕರೆ ಒಣಬೇಸಾಯದ ಜಮೀನಿನಲ್ಲಿ ಬ್ಯಾಡಗಿ ಮೆಣಸಿನ ಗಿಡಗಳನ್ನು ಬೆಳೆಸಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಸರ್ಪನ್ ಕಂಪನಿಯ ಮೆಣಸಿನ ಬೀಜಗಳನ್ನು ತಂದು ತಮ್ಮ ಜಮೀನಿನ ಸ್ವಂತ ನರ್ಸರಿಯಲ್ಲಿ ಸಸಿ ಮಾಡಿ, ಅವುಗಳನ್ನು ನಾಟಿ ಮಾಡಿದ್ದಾರೆ. ಇಸ್ರೇಲ್ ತಂತ್ರಜ್ಞಾನದೊಂದಿಗೆ ಸಾವಯವ ಬಳಕೆ ಮಾಡುತ್ತಿರುವ ಇವರು ಸಸಿಗಳನ್ನು ನಾಟಿ ಮಾಡಿದ ನಾಲ್ಕು ತಿಂಗಳಲ್ಲಿ ಮೆಣಸಿನ ಗಿಡಗಳ ತುಂಬ ಕಾಯಿ ತುಂಬಿಕೊಂಡಿವೆ.

ADVERTISEMENT

ದೇಶಿ ತಳಿಯ 5 ಆಕಳುಗಳನ್ನು ಸಾಕಿರುವ ಇವರು ಅವುಗಳ ಗೋಮುತ್ರ ಸಂಗ್ರಹಿಸಿ ಗಿಡಿಗಳಿಗೆ ಸಿಂಪರಣೆ ಮಾಡುತ್ತಿದ್ದಾರೆ. ಅಲ್ಲದೇ, ಸಾವಯವ ಗೊಬ್ಬರದ ಬಳಕೆ ಮಾಡುತ್ತಿದ್ದಾರೆ. ರಾಸಾಯಿನಿಕ ಗೊಬ್ಬರ ಬಳಕೆ ಮಾಡದೇ ಉತ್ತಮ ಫಸಲು ತೆಗೆಯುತ್ತಿರುವ ಇವರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ಆರಂಭದಲ್ಲಿ ಬೀಜ, ಸಸಿ ನಾಟಿ ಮಾಡಿ ಬೆಳೆಯಲ್ಲಿ ಕಸ ಬೆಳೆಯದಂತೆ ಗಮನ ಹರಿಸಿರುವ ಇವರ ಹೊಲದಲ್ಲಿ ಉತ್ತಮ ಫಸಲು ಬಂದಿದೆ. ಗಿಡಗಳಿಂದ ಬರುವ ಒಣ ಮೆಣಸಿನಕಾಯಿ ಮಾರಾಟ ಮಾಡುತ್ತಿರುವ ಗಿರೀಶ ಅವರು ಅಂದಾಜು ₹10 ಲಕ್ಷಕ್ಕೂ ಹೆಚ್ಚು ಲಾಭ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಮೆಣಸಿನ ಗಿಡಗಳಿಗೆ ಅಗತ್ಯವಿರುವ ಜೀವಾಮೃತ ತಯಾರಿಸಿ ನಿಗದಿತ ಸಮಯಕ್ಕೆ ಗಿಡಗಳಿಗೆ ನೀಡುವ ಮೂಲಕ ಉತ್ತಮ ಫಸಲು ಬರುವಂತೆ ನಮ್ಮ ಜಮೀನಿನಲ್ಲಿ ಕೃಷಿ ಕಾರ್ಯನಿರ್ವಹಿಸುತ್ತಿರುವ ಯರನಾಳ ಗ್ರಾಮದ ತಿಪ್ಪಣ್ಣ ಹೊನ್ನಳ್ಳಿ ಅವರು ಕಾಳಜಿ ವಹಿಸುತ್ತಿದ್ದಾರೆ ಎನ್ನುತ್ತಾರೆ ಗಿರೀಶ.

ಒಣ ಬೇಸಾಯದ ನಮ್ಮ ಹೊಲದಲ್ಲಿ ಕೇವಲ ಜೋಳ, ಗೋಧಿ, ಕಡಲೆ, ಕುಸುಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಉತ್ತಮ ಮಳೆ ಬಂದರೆ ಒಂದಷ್ಟು ಬೆಳೆ ಕೈಸೇರುತ್ತಿತ್ತು. ಆದರೆ, ನಿರೀಕ್ಷಿತ ಲಾಭ ಸಿಗುತ್ತಿರಲಿಲ್ಲ. ಹೀಗಾಗಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಬೇಕೆಂದು ನಿರ್ಧರಿಸಿ ಕೆಲ ರೈತರಿಂದ ಮಾಹಿತಿ ಸಂಗ್ರಹಿಸಿ ಮೆಣಸಿನ ಸಸಿಗಳನ್ನು ನಾಟಿ ಮಾಡಿರುವೆ. ಉತ್ತಮ ಫಸಲು ಬಂದಿದೆ. ಜೊತೆಗೆ ದೇಶಿಯ ತಳಿಯ ಗೋವುಗಳನ್ನು ಸಾಕುವ ಮೂಲಕ ಅವುಗಳ ಸಗಣಿ, ಗೋಮುತ್ರ ಬೆಳೆಗಳಿಗೆ ಬಳಕೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಗೋಶಾಲೆ ಆರಂಭಿಸಬೇಕು ಎಂದು ನಿರ್ಧಿರಿಸಿದ್ದೇನೆ ಎಂದು ಗಿರೀಶ ತೋಟಗಿ ತಿಳಿಸಿದರು.

ಗಿರೀಶ ತೋಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.