ವಿಜಯಪುರ: ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಗಟ್ಟಿಯಾದ ಇತಿಹಾಸವಿದೆ. ವಚನ ಸಾಹಿತ್ಯ, ಶರಣ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತೆದ್ದಾರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ನಡೆದ ವಚನ ಸಾಹಿತ್ಯ, ಶರಣ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯದ ಕುರಿತ ಚಿಂತನಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಚಡಚಣದ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್ ಮಾಗಣಗೇರಿ ಮಾತನಾಡಿ, ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಜಾನಪದ ಸಾಹಿತ್ಯ ನಮ್ಮ ಉಸಿರಿನಲ್ಲಿ ಉಸಿರಾಗಿ ಸೇರಿಕೊಂಡಿದೆ ಎಂದರು.
ಶರಣ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಕುರಿತು ವಕೀಲ ಮಹಮ್ಮದಗೌಸ್ ಹವಾಲ್ದಾರ್ ವಿಶೇಷ ಉಪನ್ಯಾಸ ನೀಡಿದರು.
‘ಜಾನಪದ ನಡೆದು ಬಂದ ದಾರಿ ಹಾಗೂ ಜಾನಪದ ಸಾಹಿತ್ಯದಲ್ಲಿ ಗರತಿ’ ಎಂಬ ವಿಷಯದ ಕುರಿತು ಅರ್ಜುಣಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಡಾ.ಸವಿತಾ ಝಳಕಿ ವಿಶೇಷ ಉಪನ್ಯಾಸ ನೀಡಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಡಾ. ದಿಲೀಪರಾಜ ಪಾಟೀಲ, ಪ್ರೊ. ಶಿವಕುಮಾರ ಬಾಗಿ, ರಂಗನಾಥ ಚಂದಪ್ಪ ಅಕ್ಕಲಕೋಟ, ಜಯಶ್ರೀ ಹಿರೇಮಠ, ಸುಭಾಸ ಬೆಟಗೇರಿ, ಶಶಿಕಲಾ ನಾಯ್ಕೋಡಿ, ಜಗದೀಶ ಬೋಳಸೂರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಶಿಕ್ಷಕಿ ಶಿಲ್ಪಾ ಭಸ್ಮೆ, ಪರವೀನ ಶೇಖ, ಅಭಿಷೇಕ ಚಕ್ರವರ್ತಿ, ಅರ್ಜುನ ಶಿರೂರ, ಮಲ್ಲಿಕಾರ್ಜುನ ಕೆಳಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.