ವಿಜಯಪುರ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ.
ಮಳೆಯಿಂದ ಡೋಣಿ ನದಿಗೆ ಪ್ರವಾಹ ಏರುಮುಖವಾಗಿದೆ. ತಾಳಿಕೋಟೆ ಪಟ್ಟಣದಿಂದ ವಿಜಯಪುರ, ಬಾಗಲಕೋಟೆಯತ್ತ ಹೋಗುವ ಮಾರ್ಗ ಬಂದಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮುಖ್ಯ ಮೇಲು ಸೇತುವೆ ಶಿಥಿಲಗೊಂಡಿದ್ದು ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಬ್ರಿಟಿಷ್ ಕಾಲದ ಹಳೆಯ ಸೇತುವೆ ಮೇಲೆ ಸಂಚಾರ ಮುಂದುವರೆದಿತ್ತು. ಸತತ ಮಳೆಯಿಂದಾಗಿ ಈ ರಸ್ತೆಯೂ ಜಲಾವೃತವಾಗುವ ಸಾಧ್ಯತೆ ಹೆಚ್ಚಾಗಿವೆ.
ಡೋಣಿ ನದಿಗೆ ಹಡಗಿನಾಳ ಮಾರ್ಗದಲ್ಲಿ ನೆಲಮಟ್ಟದ ಸೇತುವೆ ರಾತ್ರಿಯೇ ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಇದಕ್ಕೆ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಮೇಲ್ಸೇತುವೆ ಕಾರ್ಯ ಮುಕ್ತಾಯವಾಗಿದ್ದರೂ ರಸ್ತೆ ಜೋಡಣೆ ಕಾರ್ಯ ಮುಗಿದಿಲ್ಲ. ಹೀಗಾಗಿ ತಾಳಿಕೋಟೆ ಪಟ್ಟಣದಿಂದ ಸುರಪುರ, ಕಲಬುರ್ಗಿಯತ್ತ ಹೋಗುವ ಹಾಗೂ ವಿಜಯಪುರ ಬಾಗಲಕೋಟೆಯತ್ತ ಹೋಗುವವರು ದೇವರ ಹಿಪ್ಪರಗಿ ಮಾರ್ಗದಲ್ಲಿ ಸುಮಾರು 50 ರಿಂದ 100 ಕಿ.ಮೀ. ಸುತ್ತು ಹಾಕಬೇಕಾದ ಸಂದರ್ಭ ಒದಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.