
ಮಲ್ಲಪ್ಪ ಮತ್ತು ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿರುವ ಚಿನ್ನಾಭರಣ, ನಗದು
ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ, ಫಾರ್ಮ್ ಹೌಸ್, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹2.5 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೋರ್ಟ್ ವಾರೆಂಟ್ ಪಡೆದು ಮಂಗಳವಾರ ಆಪಾದಿತ ಅಧಿಕಾರಿಗೆ ಸಂಬಂಧಿಸಿದ ಬಸವನ ಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ಫಾರ್ಮ್ ಹೌಸ್, ಮುದ್ದೇಬಿಹಾಳದಲ್ಲಿರುವ ಮಾವನ ಮನೆ ಮತ್ತು ಕಚೇರಿ ಹಾಗೂ ವಿಜಯಪುರದ ನವರಸಪುರದಲ್ಲಿರುವ ಮನೆ, ಬ್ಯಾಂಕ್ ಲಾಕರ್ನಲ್ಲಿ ಶೋಧ ನಡೆಸಿದಾಗ ₹29.42 ಲಕ್ಷ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳು ಸೇರಿದಂತೆ ಅಂದಾಜು ₹2.5 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ ಎಂದು ವಿಜಯಪುರ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ್ ತಿಳಿಸಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ, ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಿ. ಟಕ್ಕನ್ನವರ್, ಆನಂದ ಡೋಣಿ, ನಿಂಗಪ್ಪ ಪೂಜೇರಿ, ಸಂಗಮನಾಥ ಹೊಸಮನಿ ಸೇರಿದಂತೆ ವಿಜಯಪುರ ಮತ್ತು ಬೆಳಗಾವಿ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.