ಸಿಂದಗಿ: ‘ಹಳ್ಳಿಯಿಂದ ದಿಲ್ಲಿಯವರೆಗೆ ಅಭಿವೃದ್ಧಿಯಾದಾಗಲೇ ದೇಶದ ನಿಜವಾದ ಅಭಿವೃದ್ಧಿ. ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸಲು ಯುವಕರು ದೇಶಪ್ರೇಮದೊಂದಿಗೆ ಸರಳ ಜೀವನ ಮೈಗೂಡಿಸಿಕೊಂಡು ದೇಶಕ್ಕಾಗಿ ತಮ್ಮದೇ ಆದ ಸೇವಾ ಕಾರ್ಯ ಸಲ್ಲಿಸಬೇಕು’ ಎಂದು ಶಾಸಕ ಎಂ.ಸಿ.ಮನಗೂಳಿ ಸಲಹೆ ನೀಡಿದರು.
ಮಹಾತ್ಮ ಗಾಂಧಿ ಅವರ 152ನೇ ಜನ್ಮ ದಿನಾಚರಣೆಯಲ್ಲಿ ಕುಮಸಗಿಯ ಗಾಂಧಿ ವೃತ್ತದಲ್ಲಿ ಐದಡಿ ಅಡಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ ಅವರಯ ಮಾತನಾಡಿದರು.
ಶಾಸಕ ಎಂ.ಸಿ.ಮನಗೂಳಿ ಅವರು ವೈಯಕ್ತಿಕ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿದ್ದು ಅಭಿನಂದನಾರ್ಹ ಕಾರ್ಯ ಎಂದು ಸಮಾರಂಭದ ಸಾನ್ನಿಧ್ಯ ವಹಿಸಿದ್ದ ವೆಂಕಟೇಶ್ವರಮಠದ ಅಭಿನವ ವೆಂಕಟೇಶ್ವರ ಸ್ವಾಮೀಜಿ ಪ್ರಶಂಸಿದರು.
ಆಲಮೇಲದ ಸಾಹಿತಿ ಸಿದ್ಧರಾಮ ಉಪ್ಪಿನ, ನಿವೃತ್ತ ಪ್ರಾಚಾರ್ಯ ಎಸ್.ಎಸ್.ಧನಶೆಟ್ಟಿ ಹಾಗೂ ಇಂಡಿ ಕಾಲೇಜಿನ ಪ್ರಾಧ್ಯಾಪಕ ರಾಘವೇಂದ್ರ ಜೋಶಿ ಮಾತನಾಡಿದರು.
ದಲಿತ ಸಂಘರ್ಷ ಸಮಿತಿ ಪ್ರಮುಖ ಚಂದ್ರಕಾಂತ ಸಿಂಗೆ ಮಾತನಾಡಿ, ‘ಗ್ರಾಮದ ಯುವಕರು ಶಿವಲಿಂಗ ಯಾತನೂರ, ಸಿದ್ದು ಬಡಿಗೇರ, ಗುರು ಚಾವರ ನೇತೃತ್ವದಲ್ಲಿ ಹಲವಾರು ವರ್ಷಗಳ ಹಿಂದೆಯೇ ಗಾಂಧಿ ವೃತ್ತ ನಿರ್ಮಿಸಿ ಅಲ್ಲಿ ಚಿಕ್ಕ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ವೃತ್ತದಲ್ಲಿ ನಿಂತುಕೊಂಡಿರುವ ಗಾಂಧೀಜಿ ಪುತ್ಥಳಿ ಸ್ಥಾಪಿಸುವಂತೆ ಶಾಸಕ ಮನಗೂಳಿಯವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಒಂದು ಸುಂದರ ವೃತ್ತ ನಿರ್ಮಾಣಗೊಂಡು ಪ್ರತಿಮೆ ಅನಾವರಣಗೊಂಡಿದೆ’ ಎಂದು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೌಲಪ್ಪ ಸೊನ್ನ, ಖಾಜಪ್ಪ ಶಂಭೇವಾಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.