ಚಡಚಣ: ಹಾಲುಮತ ಸಮಾಜದವರ, ಕರ್ನಾಟಕ ಗಡಿ ಅ೦ಚಿನಲ್ಲಿರುವ ಮಹಾರಾಷ್ಟ್ರದ ಹುಲಜಂತಿ ಗ್ರಾಮದಲ್ಲಿ ಮಾಳಿ೦ಗರಾಯನ ಜಾತ್ರಾ ಮಹೋತ್ಸವ ಅ.21ರಿಂದ ಇಂದಿನಿಂದ 5 ದಿನಗಳವರೆಗೆ ವೈಭವದಿಂದ ಜರುಗಲಿದೆ.
14ನೇ ಶತಮಾನದಲ್ಲಿ ಬದುಕಿ ಹಲವು ಪವಾಡ ಮಾಡಿ ಹುಲಜಂತಿ ಗ್ರಾಮದಲ್ಲಿ ಐಕ್ಯಗೊಂಡ ಮಾಳಿಂಗರಾಯ ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಮಾಳಿಂಗರಾಯನ ದೇವಾಲಯದ ಶಿಖರಕ್ಕೆ ಸಾಕ್ಷಾತ್ ಶಿವನೇ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ರಾತ್ರಿ ಮುಂಡಾಸು ಸುತ್ತುತ್ತಾನೆ ಎಂಬುದು ಭಕ್ತರ ನಂಬಿಕೆ. ಸೋಮವಾರ ಅಮಾವಾಸ್ಯೆ ರಾತ್ರಿ ಸುತ್ತಿದ ಮುಂಡಾಸನ್ನು ನೋಡಲು ಇಂದು (ಮಂಗಳವಾರ) ಕರ್ನಾಟಕ, ಮಹಾರಾಷ್ಟ್ರ, ಆ೦ಧ್ರಪ್ರದೇಶ, ತಮಿಳುನಾಡು ಸೇರಿದಂತೆ ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಸಂಜೆ ನಾಲ್ಕುಗಂಟೆಗೆ ಮಾಳಿಂಗರಾಯನ ದೇವಾಲಯದ ಮುಂಭಾಗದಲ್ಲಿರುವ ವಿಶಾಲವಾದ ಹಳ್ಳದ ಮೈದಾನದಲ್ಲಿ ಸುಮಾರು 30ಕ್ಕೂ ಅಧಿಕ ದೇವರುಗಳ ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮ ಅದ್ದೂರಿಯಾಗಿ ಜರುಗಲಿದೆ.
5 ದಿನಗಳ ವರೆಗೆ ನಡೆಯುವ ಜಾತ್ರೆಯಲ್ಲಿ ಭಂಡಾರ ಮಾರಾಟ, ನಾಟಕ ಸಂಗೀತ ಕುಣಿತ ಹಲವಾರು ಮನರಂಜನೆ. ಕೃಷಿ ಸಾಧನಗಳ ಮಳಿಗೆಗಳು ಈಗಾಗಲೇ ಬೀಡು ಬಿಟ್ಟು ಎಲ್ಲರನ್ನು ಆಕರ್ಷಿಸುತ್ತಿವೆ.
ದೇವಾಲಯದ ಸಮಿತಿ ಜಾತ್ರೆಗೆ ಆಗ ಮಿಸುವ ಭಕ್ತರಿಗಾಗಿ ಸೂಕ್ತ, ರಕ್ಷಣೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.