
ಹೊರ್ತಿ: ‘ಅಧ್ಯಾತ್ಮ ಹಾಗೂ ಧಾರ್ಮಿಕ ಕರ್ಯಕ್ರಮ ಮತ್ತು ಪುಣ್ಯಸ್ಮರಣೆ, ಜಾತ್ರಾ ಮಹೋತ್ಸವಗಳ ವೇದಿಕೆಯಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡವರದಲ್ಲ, ಭಾಗ್ಯ-ಪುಣ್ಯವಂತರ ಮದುವೆಯಾಗಿವೆ’ ಎಂದು ನಾಗಠಾಣ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಶಿಗಣಾಪುರದ ಪವಾಡ ಪುರುಷ ರುದ್ರ ಮಹಾರಾಜರ 23ನೇ ವರ್ಷದ ಪುಣ್ಯಾರಾಧನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ಧ ಸಾಮೂಹಿಕ ವಿವಾಹ ಮತ್ತು ಧರ್ಮ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಗಣಾಪುರ ಗ್ರಾಮವು ಪವಾಡ ಪುರುಷ ರುದ್ರಮಹಾಶಿವಯೋಗಿಗಳ ಪುಣ್ಯ ಭೂಮಿಯಾಗಿದ್ದು, ಈ ಶಿಗಣಾಪುರ ಗ್ರಾಮವು ಚಿಕ್ಕ ಗ್ರಾಮವಾಗಿದ್ದರೂ, ಇಲ್ಲಿನ ಜನರು ಅಧ್ಯಾತ್ಮ ಹಾಗೂ ಧಾರ್ಮಿಕ ಮತ್ತು ಸಾಮಾಜಿಕ, ವಿದಾಯಕ ಕಾರ್ಯಕ್ರಮಗಳನ್ನು ಅತ್ಯಂತ ಸಂಭ್ರಮದಿಂದ ನಡೆಸುತ್ತಾರೆ. ಶ್ರೀಮಂತಿಕೆ ಮೆರೆದ ಶಿಗಣಾಪುರ ಗ್ರಾಮವಾಗಿದೆ ಎಂದರು.
ಚಡಚಣ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರವಿದಾಸ ಜಾಧವ ಮಾತನಾಡಿ, ಗ್ರಾಮದಲ್ಲಿ ಮಹಿಳೆಯರಿಗೆ ₹2 ಸಾವಿರ ಗೃಹಲಕ್ಷ್ಮಿ ಹಣ ಬಾರದಿದ್ದರೆ ಮಹಿಳೆಯರು ಬಿಪಿಎಲ್ ಹಾಗೂ ಆಧಾರ ಕಾರ್ಡ್ ಮತ್ತು ಬ್ಯಾಂಕ್ ಉಳಿತಾಯ ಖಾತೆ ಪಾಸ್ಬುಕ್ ದಾಖಲೆಗಳನ್ನು ನನಗೆ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ಕಡೆ ಅರ್ಜಿ ಕೊಡಿ, ಒಂದು ವಾರದಲ್ಲೇ ಗೃಹಲಕ್ಷ್ಮಿ ಹಣ ಜಮೆ ಮಾಡಿಸಿಕೊಡಲಾಗುವುದು ಎಂದು ಹೇಳಿದರು.
ಹಾವಿನಾಳದ ವಿಜಯಮಹಾಂತೇಶ್ವರ ಶಿವಾಚಾರ್ಯ ಹಾಗೂ ಅಕ್ಕಮಹಾದೇವಿ ಅಮ್ಮನವರು ಮತ್ತು ಅಥರ್ಗಾ ಶ್ರೀಗಳು ಮಾತನಾಡಿ, ‘ದಾನ, ಧರ್ಮ ಮತ್ತು ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ಯಾರಿಗೂ ಮನನೋಯಿಸದೇ ಸಹಬಾಳ್ವೆಯಿಂದ ಸುಂದರ ಜೀವನ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.
ರೇಣುಕಾ ಕಟಕದೊಂಡ, ಚಿಕ್ಕಾಲಗುಂಡಿಯ ಶಿವಶರಣಾನಂದ ಸ್ವಾಮೀಜಿ, ಕಮೀಟಿ ಅಧ್ಯಕ್ಷ ರವಿಕುಮಾರ ಬಿರಾದಾರ, ನಂದರಗಿ ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ಪೂಜಾರಿ, ಪ್ರಕಾಶಗೌಡ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಅಪ್ಪುಗೌಡ ಪಾಟೀಲ, ಶಂಕರಗೌಡ ಬಿರಾದಾರ, ಸುನೀಲಗೌಡ ಬಳ್ಳೊಳ್ಳಿ, ಹಣಮಂತರಾಯಗೌಡ ಬಿರಾದಾರ, ಶ್ರೀಶೈಲ ಬಿರಾದಾರ, ಪ್ರಭುಲಿಂಗ ಪ್ರಧಾನ, ಅಬುಸಾಬ ದೊಡಮನಿ ಇದ್ದರು. ರವಿಕುಮಾರಗೌಡ ಬಿರಾದಾರ ಸ್ವಾಗತಿಸಿ, ನಿರೂಪಿಸಿದರು. ಪ್ರಕಶಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.