ವಿಜಯಪುರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಲಾಭ ಸಾರ್ವಜನಿಕರಿಗೆ ಸಕಾಲದಲ್ಲಿ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿ ರಚಿಸಿ, ಕ್ರೀಯಾ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಮತ್ಸ್ಯ ಯೋಜನೆ ಜಿಲ್ಲಾ ಸಮಿತಿ ಕ್ರೀಯಾ ಯೋಜನೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶಗಳಿದ್ದು, ಎರಡು ಬೃಹತ್ ಜಲಾಶಯ ಹಾಗೂ 189 ಕೆರೆಗಳು ಮತ್ತು ಕೃಷಿ ಹೊಂಡಗಳಿವೆ. ಇವುಗಳ ಜೊತೆಗೆ ಮೀನುಗಾರಿಕೆಗೆ ಮತ್ತಷ್ಟು ಅವಕಾಶಗಳು ದೊರೆಯುವಂತೆ ಕ್ರೀಯಾ ಯೋಜನೆ ರೂಪಿಸಿ ಎಂದರು.
ಈ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ಮೀನುಗಾರಿಕೆಗೆ ಸಹಾಯವಾಗಲು ವಾಹನಗಳ ಖರೀದಿಗೆ ಶೇ 60 ರಿಯಾಯಿತಿ ಹಾಗೂ ಸಾಮಾನ್ಯ ವರ್ಗದವರಿಗೆ ಶೇ 40ರಷ್ಟು ರಿಯಾಯಿತಿ ಸಿಗಲಿದೆ ಎಂದು ಹೇಳಿದರು.
ಈ ಯೋಜನೆಯಡಿ ಮೀನುಗಾರಿಕೆ ಮಾಡಲು ಇಚ್ಛೆ ಇರುವವರಿಗೆ ವಾಹನ ಖರೀದಿ, ಮೀನು ಸಂಗ್ರಹಣೆಗೆ ಅವಕಾಶ, ಸಂಘಗಳ ನಿರ್ಮಾಣ, ಮೀನು ಮಾರಾಟಕ್ಕೆ ಐಸ್ಬಾಕ್ಸ್, ಮೀನುಗಳ ತಾಜಾತನ ಕಾಯ್ದಿಟ್ಟುಕೊಳ್ಳಲು ಕೋಲ್ಡ್ ಸ್ಟೋರೇಜ್ ಸೇರಿದಂತೆ ವಿವಿಧ ಸೌಲಭ್ಯಗಳಿದ್ದು, ಇವುಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆಯಾಗಬೇಕು ಎಂದರು.
ಮೀನುಗಾರಿಕೆ ಸಂಘಗಳನ್ನು ನಿರ್ಮಾಣ ಮಾಡಿ, ಮೀನು ಸಂಗ್ರಹ ಮತ್ತು ಮಾರಾಟ ಮಾಡುವ ಸಂಘಗಳು ಹಾಗೂ ವೈಯಕ್ತಿಕವಾಗಿ ಮಾರಾಟ ಮಾಡುವವರಿಗೆ ಮತ್ತು ಸಾಂಪ್ರದಾಯಿಕ ಮೀನುಗಾರರಿಗೂ ಅವಕಾಶಗಳಿದ್ದು ಇವುಗಳ ಸರಿಯಾದ ಉಪಯೋಗವನ್ನು ಸಾರ್ವಜನಿಕರಿಗೆ ಮುಟ್ಟುವಂತಾಗಬೇಕು. ಸರ್ಕಾರದ ಹೊಸ ಯೋಜನೆ ಸಾರ್ವಜನಿಕರಿಗೆ ಹಾಗೂ ಮೀನುಗಾರರಿಗೆ ಮತ್ತು ಅವರ ಕುಟುಂಬಗಳಿಗೆ ಮುಟ್ಟುವಂತಾಗಬೇಕು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮೀನುಗಾರಿಕೆ ಇಲಾಖೆ ಅಧಿಕಾರಿ ಹಾಗೂ ಪ್ರಗತಿಪರ ಮೀನುಗಾರರು ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.