ವಿಜಯಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರನ್ನು ಅಮಾನತುಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದರು.
ಚಂದ್ರಶೇಖರ ನುಗ್ಲಿ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪ ಹೊರಿಸಿ, ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ. ಬಾಗಲಕೋಟೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಅವರು ಕಾನೂನಿನ ಸಹಜ ನ್ಯಾಯದ ಎಲ್ಲಾ ತತ್ವಗಳನ್ನು ಗಾಳಿಗೆ ತೂರಿ ಸರ್ವಾಧಿಕಾರ ಮೆರೆದಿದ್ದಾರೆ. ನಿಯಮಾನುಸಾರ ಕಾರಣ ಕೇಳಿ ನೋಟಿಸ್ ನೀಡಿ, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಇದಾವುದನ್ನೂ ಪಾಲಿಸಿಲ್ಲ. ಆದ್ದರಿಂದ ಶ್ರೀಶೈಲ ಬಿರಾದಾರ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಚಂದ್ರಶೇಖರ ನುಗ್ಲಿ ಅವರ ಅಮಾನತು ಆದೇಶವನ್ನು ತಕ್ಷಣವೇ ರದ್ದುಗೊಳಿಸಿ, ಅವರು ವರ್ಗಾವಣೆಗೊಂಡ ಸ್ಥಳಕ್ಕೆ ಹಾಜರಾಗಲು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ.ಗೌಡರ, ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಹಣಮಂತ ಕೊಣದಿ, ಬಿ.ಎನ್.ಪಾಟೀಲ, ಸಿ.ಕೆ.ಭಜಂತ್ರಿ, ಅಲ್ಲಾಭಕ್ಷ ವಾಲಿಕಾರ, ಅಶೋಕ ಬೂದಿಹಾಳ, ಜುಬೇರ ಕೆರೂರ, ಎಸ್.ಬಿ.ಪಾಟೀಲ, ಆನಂದ ಪವಾರ, ನಿಜಪ್ಪ ಮೇಲಿನಕೇರಿ, ಎಸ್.ವಿ.ಹರಳಯ್ಯ ಆರ್.ಎಚ್.ಜಾಧವ, ಬಸವರಾಜ ಪಡಗಾನೂರ, ಬಸೀರ ನದಾಫ, ಬಿ.ಎ.ಪಾಟೀಲ, ಆರ್.ಎನ್. ಅಂಗಡಿ, ಐ.ಎಂ.ಬೇಂದ್ರೆಕರ್, ಎಂ.ಜಿ.ಅಗ್ನಿ, ರಾಜು ತೇರದಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.