ವಿಜಯಪುರ: ‘ಹಣಕ್ಕಾಗಿ ಪೊಲೀಸರು ನನ್ನ ತಂದೆಯನ್ನು ಕೊಲೆ ಮಾಡಿದ್ದಾರೆ. ನಾನೂ ಒಬ್ಬ ಪೊಲೀಸ್ ಹೆಡ್ಕಾನ್ಸ್ಟೆಬಲ್ ಆಗಿದ್ದರೂ ನನ್ನ ತಂದೆಯ ಜೀವ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಾರ್ವಜನಿಕರ ಪಾಡೇನು..’ ಎಂದು ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಂಟನೂರ ಗ್ರಾಮದ ನಿವಾಸಿ ಬಸವರಾಜ ಪಾಟೀಲ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸವರಾಜ 13 ವರ್ಷಗಳಿಂದ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದಾರೆ. ತಮ್ಮ ತಂದೆ ಹನಮಂತರಾಯ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಸವರಾಜ ಪಾಟೀಲ, ‘ದಾಯಾದಿಗಳೊಂದಿಗೆ ಜಮೀನು ಸಂಬಂಧ ವಿವಾದವಿದೆ. ಅವರಿಂದ ಹಣ ಪಡೆದ ಸಿಂದಗಿ ಪೊಲೀಸರು, ನಮ್ಮ ಕುಟುಂಬದ ವಿರುದ್ಧ 2006ರಿಂದ ದೌರ್ಜನ್ಯ ನಡೆಸುತ್ತಿದ್ದಾರೆ. 2016ರಲ್ಲಿ ತಂದೆಯನ್ನು ಕೊಲೆ ಮಾಡಿದ್ದಾರೆ. ತಾಯಿ, ಸಹೋದರರ ಮೇಲೆಯೂ ಹಲ್ಲೆ ಮಾಡಿದ್ದರು. ಅವರಿಬ್ಬರು ಚೇತರಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ತಂದೆ ಸಾಯುವ ಮುನ್ನ ಬರೆದ ಡೆತ್ ನೋಟ್ನಲ್ಲಿ ದೌರ್ಜನ್ಯ ಎಸಗಿದ ಸಿಂದಗಿಯ ಎಂಟು ಜನ ಪೊಲೀಸರ ಹೆಸರುಗಳನ್ನು ಬರೆದಿದ್ದಾರೆ. ದಾಖಲೆ, ಸಾಕ್ಷಿಗಳಿದ್ದರೂ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದುವರೆಗೂ ಅವರ ವಿರುದ್ಧ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.
ಹೇಳಿಕೆ ಗೊಂದಲ: ‘ಪೊಲೀಸರ ದೌರ್ಜನ್ಯದಿಂದಲೇ ನಮ್ಮ ತಂದೆ ಸಾವನಪ್ಪಿದ್ದಾರೆ. ಕೊಲೆಯೊ, ಆತ್ಮಹತ್ಯೆಯೋ ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ಬಸವರಾಜ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.