ವಿಜಯಪುರ: ನಗರದ ಕೇಂದ್ರ ಅಂಚೆ ಕಚೇರಿಗೆ ಪ್ರತಿ ದಿನ ಬಂದುಹೋಗುವವರನ್ನು ನಿಯಂತ್ರಿಸುವ ಸಲುವಾಗಿ ಕಚೇರಿಯ ಪ್ರವೇಶ ದ್ವಾರದಲ್ಲಿ ಇಲಾಖೆಯ ಸಿಬ್ಬಂದಿ ಕೈಯಲ್ಲಿ ಬಡಿಗೆ ಹಿಡಿದು ನಿಲ್ಲುತ್ತಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಅಂಚೆ ಇಲಾಖೆಗೆ ತಮ್ಮ ವ್ಯವಹಾರಕ್ಕಾಗಿ ಬಂದು, ಹೋಗುತ್ತಾರೆ. ಗ್ರಾಹಕರು ಅಂಚೆ ಇಲಾಖೆಯನ್ನೂ ಅತ್ಯಂತ ವಿಶ್ವಸನೀಯ ಸಂಸ್ಥೆಯಂದು ನಂಬಿದ್ದಾರೆ. ಆದರೆ, ಕಚೇರಿಯ ಬಾಗಿಲಲ್ಲಿ ಸಿಬ್ಬಂದಿ ದೊಡ್ಡದಾದ ಬಡಿಗೆ ಹಿಡಿದುಕೊಂಡು ನಿಂತುಕೊಂಡಿದ್ದರಿಂದ ಗ್ರಾಹಕರು ಭಯಭೀತರಾಗುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಅಂಚೆ ಕಚೇರಿಗೆ ವಯೊವೃದ್ಧ ವಿಧುವಾ ವೇತನ ಪಡೆಯುವವರು. ಉಳಿತಾಯ ಖಾತೆದಾರರು, ಲಕೋಟೆ ರವಾನೆ ಕಳುಹಿಸಲು ಬರತ್ತಾರೆ ಅವರನ್ನು ಬಡಿಗೆ ಹಿಡಿದು ಒಳಗೆ ಬಿಡುವ ಈ ಪ್ರಕ್ರಿಯೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗ್ರಾಹಕರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಮನುಷ್ಯರನ್ನು ಪ್ರಾಣಿಗಳಂತೆ ನೋಡಬಾರದು. ಸದ್ಯ ಅತ್ಯಂತ ಕಡಿಮೆ ಪ್ರಮಾಣದ ಜನರು ಅಂಚೆ ಕಚೇರಿಗೆ ಬರುತ್ತಾರೆ. ಗದ್ದಲ ಹೆಚ್ಚಾದರೆ ಪೊಲೀಸರ ಸಹಾಯ ಪಡೆದುಕೊಳ್ಳಬಹುದು. ಇಲಾಖೆಯ ಈ ವರ್ತನೆ ಮಾನವೀಯ ಮೌಲ್ಯದ ಅಪಮಾನವಾಗಿದೆ. ಈ ರೀತಿ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಅವರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.