
ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಉದ್ದೇಶಿತ ಪಿಪಿಪಿ ಮಾದರಿ ಕೈಬಿಟ್ಟು, ಸರ್ಕಾರಿ ಕಾಲೇಜು ಆರಂಭಿಸಬೇಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಉಳಿಸುವಂತೆ ಆಗ್ರಹಿಸಿ ದೇವರಹಿಪ್ಪರಗಿ ತಾಲ್ಲೂಕಿನ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟಿಸಿ, ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಗುರುವಾರ ಸಭೆ ಸೇರಿದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ, ಸ್ಪಂದನಾ ತಾಲ್ಲೂಕು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ, ಜನವೇದಿಕೆ, ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಉದ್ದೇಶಿತ ಪಿಪಿಪಿ ಮಾದರಿ ಕೈಬಿಡಲು ಒತ್ತಾಯಿಸಿ ಮೆರವಣಿಗೆ ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಂಬೇಡ್ಕರ್ ವೃತ್ತದ ಮೂಲಕ ಇಂಡಿ ರಸ್ತೆಯಲ್ಲಿನ ತಹಶೀಲ್ದಾರ್ ಕಾರ್ಯಾಲಯ ತಲುಪಿ ಧರಣಿ ಕುಳಿತರು.
ಹೋರಾಟ ಸಮಿತಿಯ ಪ್ರಕಾಶ ಗುಡಿಮನಿ ಮಾತನಾಡಿ, ‘ಸರ್ಕಾರ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರದಲ್ಲಿದೆ. ಅಷ್ಟೇ ಅಲ್ಲ ಜಿಲ್ಲೆಯ ಶಾಸಕರೊಬ್ಬರು ₹500 ಕೋಟಿ ಬಂಡವಾಳ ಹೂಡುವುದಾಗಿ ಸದನದಲ್ಲೇ ಹೇಳಿದ್ದಾರೆ. ಅವರಿಗೆ ಖಾಸಗಿ ಕಾಲೇಜು ಬೇಕೆನಿಸಿದರೆ ನಾಲ್ಕಾರು ಖಾಸಗಿ ಕಾಲೇಜುಗಳನ್ನು ಆರಂಭಿಸಲಿ. ಆದರೆ ಪಿಪಿಪಿ ಹೆಸರಲ್ಲಿ ಸರ್ಕಾರಿ ಕಾಲೇಜು ಅಪಹರಿಸುವುದನ್ನು ಇಡೀ ಜಿಲ್ಲೆಯ ಜನತೆ ಖಂಡಿಸುತ್ತದೆ’ ಎಂದರು.
ಕರ್ನಾಟಕ ಜನಾರೋಗ್ಯ ಚಳವಳಿಯ ಟೀನಾ ಝೇವಿಯರ್, ರೈತಸಂಘದ ರೇಣುಕಾ ಪಾಟೀಲ, ಡಿಎಸ್ಎಸ್ ಸಂಚಾಲಕ ರಾವುತ ತಳಕೇರಿ, ಶ್ರೀನಾಥ ಪೂಜಾರಿ, ಅಕ್ರಮ್ ಮಸಾಲ್ಕರ್ ಮಾತನಾಡಿದರು. ಬಿಜೆಪಿ ಹಿಂದುಳಿದ ಮೋರ್ಚಾ ಪದಾಧಿಕಾರಿ ರಮೇಶ ಈಳಗೇರ, ಜೆಡಿಎಸ್ ಯುವಘಟಕದ ಅಧ್ಯಕ್ಷ ಮುನೀರ್ ಅಹ್ಮದ್ ಮಳಖೇಡ, ರೈತಸಂಘದ ಶಾಂತಪ್ಪ ದೇವೂರ, ಹೃದಯಮೇರಿ, ಶಾಂತಾ ದೇಗಿನಾಳ, ರಶ್ಮೀ ಗುತ್ತೇದಾರ, ಲಕ್ಷ್ಮಿ ಇಂಚಗೇರಿ, ಭಾಗ್ಯ ಇಂಡಿಮಠ, ಪೂಜಾ ತೊರವಿ, ಸುರೇಶ ಜೆ.ಬಿ, ಇಮಾಮ್ ಮುಲ್ಲಾ, ಅಪ್ಪು ಮುಲ್ಲಾ ಇದ್ದರು.