ADVERTISEMENT

ಕೇಂದ್ರದಿಂದ ₹1,433 ಕೋಟಿ ಅನುದಾನ: ಜಿಗಜಿಣಗಿ

ವಿಜಯಪುರ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 14:26 IST
Last Updated 6 ಮಾರ್ಚ್ 2025, 14:26 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ₹1,433 ಕೋಟಿ ಅನುದಾನ ಮಂಜೂರಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಲೋಕೋಪಯೋಗ ಇಲಾಖೆ ಅಡಿಯಲ್ಲಿ ಬರುವ ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ಧಿ, ಶಿಕ್ಷಣ, ಮೀನುಗಾರಿಕೆ, ಪಶುಸಂಗೋಪನೆ, ಆರೋಗ್ಯ, ಸಣ್ಣ ನೀರಾವರಿ, ಜೆಜೆಎಂ, ಶೀಥಲ ಘಟಕ ನಿರ್ಮಾಣಕ್ಕೆ ಈ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.

ಅರಕೇರಿಯಲ್ಲಿ 2 ಸಾವಿರ ಮೆಟ್ರಿಕ್‌ ಟನ್‌ ಸಾಮಾರ್ಥ್ಯದ ಶೀತಲ ಘಟಕ ನಿರ್ಮಾಣಕ್ಕೆ ₹10.11 ಕೋಟಿ ಅನುದಾನ ನೀಡಲಾಗಿದೆ ಎಂದರು.

ADVERTISEMENT

900 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಜೆಜೆಎಂ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ ಎಂದರು.

ತಾಂತ್ರಿಕ ಅಡಚಣೆ:

ಸೋಲಾಪುರ– ಗದಗ ನಡುವಿನ ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಅಡಚಣೆ ಇರುವುದರಿಂದ ‘ವಂದೇ ಭಾರತ್‌’ ರೈಲು ಈ ಮಾರ್ಗದಲ್ಲಿ ಸದ್ಯ ಓಡಿಸಲು ಅನುಮತಿ ಸಿಕ್ಕಿಲ್ಲ. ಇದು ಸರಿಯಾದ ಬಳಿಕ ವಂದೇ ಭಾರತ್‌ ರೈಲು ಸಂಚರಿಸಲಿದೆ ಎಂದು ಹೇಳಿದರು.

ನಿಷ್ಕಾಳಜಿ ಸಹಿಸಲ್ಲ:

ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನದಲ್ಲಿ ಆಗಿರುವ ಲೋಪ, ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ, ನಿಷ್ಕಾಳಜಿ ಸಹಿಸುವುದಿಲ್ಲ. ಈ ಬಗ್ಗೆ ಆಯಾ ಕ್ಷೇತ್ರದ ಶಾಸಕರು ಕೂಡ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹಸಿರು ಪೀಠದಲ್ಲಿ ಪ್ರಕರಣ:

ವಿಮಾನ ನಿಲ್ದಾಣ ಬಹುತೇಕ ಕಾರ್ಯ ಪೂರ್ಣವಾಗಿದೆ. ಅಗ್ನಿ ಶಾಮಕ ವ್ಯವಸ್ಥೆ ಟೆಂಡರ್‌ ಬಾಕಿ ಇದೆ. ಶೀಘ್ರ ಪೂರ್ಣವಾಗಲಿದೆ. ಸುಪ್ರೀಂ ಕೋರ್ಟ್‌ ಹಸಿರು ಪೀಠದಲ್ಲಿ ಪ್ರಕರಣ ಇದೆ. ಅದು ತೆರವಾದ ಬಳಿಕ ವಿಮಾನ ಸಂಚಾರ ಆರಂಭವಾಗಲಿದೆ ಎಂದರು.

ನೋವಿದೆ:

ಬಿಜೆಪಿ ಆಂತರಿಕ ಕಚ್ಚಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಹೈಕಮಾಂಡ್‌ ಇದೆ. ಅವರು ಗಮನಿಸುತ್ತಾರೆ. ಆದರೆ, ಪಕ್ಷದ ಕಾರ್ಯಕರ್ತರಲ್ಲಿ ಈ ಬಗ್ಗೆ ತೀವ್ರ ನೋವಿದೆ ಎಂದು ಹೇಳಿದರು.

‘ಪಕ್ಷ ಸಂಘಟನೆಯಲ್ಲಿ ಎಂದೂ ನನ್ನ ಸಲಹೆ ಪಡೆದಿಲ್ಲ. ಅವರು ಕೇಳಿದರೆ ಸೂಕ್ತ ಸಲಹೆ ನೀಡುತ್ತೇನೆ. ಪಕ್ಷದಲ್ಲಿ ಅತ್ಯಂತ ಹಿರಿಯ ರಾಜಕಾರಣಿ. ಅನುಭವ ಇದೆ. ಆದರೆ, ನನ್ನನ್ನು ಉಪಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ. ಸಂಘ ಪರಿವಾರದಿಂದ ಬಂದಿಲ್ಲ ಎಂಬ ಕಾರಣ ಇರಬಹುದು’ ಎಂದರು.

‘ನಾನು ಎಂದೂ ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಯಾರ ಚುಂಗು ಹಿಡಿದುಕೊಂಡು ಅಡ್ಡಾಡುವುದಿಲ್ಲ, ಅಧಿಕಾರಕ್ಕಾಗಿ ಯಾರ ಮನೆ ಬಾಗಿಲ ಕಾಯುವ ಮನುಷ್ಯ ನಾನಲ್ಲ. ಅವರು ಕೊಟ್ಟರೂ ಅಷ್ಟೇ, ಬಿಟ್ಟರೂ ಅಷ್ಟೆ’ ಎಂದು ಖಡಕ್ ಹೇಳಿಕೆ ನೀಡಿದರು.

ಬಿಜೆಪಿ ಮಾಧ್ಯಮ ವಕ್ತಾರ ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕೇಂದ್ರದಿಂದ ಜಿಲ್ಲೆಗೆ ಬರುವ ಅನುದಾನದಲ್ಲಿ ಯಾವುದೇ ಕೊರತೆಯಾಗಿಲ್ಲ. ಕೇಂದ್ರ ಸರ್ಕಾರ ಇಷ್ಟೊಂದು ದೊಡ್ಡ ಮೊತ್ತದ ಅನುದಾನ ನೀಡಿರುವುದು ಸಂತೋಷ ಸಂಗತಿ 
ರಮೇಶ ಜಿಗಜಿಣಗಿ ಸಂಸದ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.