ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ, ತತ್ವ, ಸಂದೇಶ ಕುರಿತು ಇಸ್ಲಾಂ ಧರ್ಮಿಯರಿಗೆ ಹಾಗೂ ಅನ್ಯ ಧರ್ಮಿಯರಿಗೆ ತಿಳಿವಳಿಕೆ ನೀಡುವ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 9ರ ವರೆಗೆ ನಗರದಲ್ಲಿ ‘ಸೀರತ್ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ವಿಜಯಪುರ ಘಟಕದ ಅಧ್ಯಕ್ಷ ಮಹಮ್ಮದ್ ಯೂಸುಪ್ ಖಾಜಿ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಮ್ಮದ್ ಪೈಗಂಬರ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳು ಹರಡಲಾಗುತ್ತಿದೆ. ಇದರ ನಿವಾರಣೆಯಾಗಬೇಕಿದೆ. ಧರ್ಮ, ಧರ್ಮಗಳ ನಡುವೆ ಶಾಂತಿ, ಸೌಹಾರ್ದ, ಸಹೋದರತೆ, ಸಹಾನುಭೂತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ‘ಬನ್ನಿರಿ ಪ್ರವಾದಿ ಅರಿಯೋಣ’ (ಸೀರತ್) ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಮ್ಮದ್ ಪೈಗಂಬರ್ ಅವರು ಸಾಮಾಜಿಕ ಸಮಾನತೆಗೆ ಆದ್ಯತೆ ನೀಡಿದ್ದರು. ಶಿಕ್ಷಣದಲ್ಲಿ ಜ್ಞಾನದ ಜೊತೆ ವೈಚಾರಿಕತೆ ಇರಬೇಕು ಎಂದು ಪ್ರತಿಪಾದಿಸಿದ್ದರು. ಮಹಿಳಾ ವಿಮೋಚಕರಾಗಿದ್ದರು, ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು, ಪರಧರ್ಮ ಸಹಿಷ್ಣುತೆಗೆ ಆದ್ಯತೆ ನೀಡಿದ್ದರು ಎಂದು ಅವರು ಹೇಳಿದರು.
ಪುಸ್ತಕ ಬಿಡುಗಡೆ:ಪ್ರವಾದಿ ಜೀವನ ಮತ್ತು ಸಂದೇಶ, ಪ್ರವಾದಿ ಅವರ ವಿವಾಹ, ವಿವಾದ ಮತ್ತು ವಿಮರ್ಶೆ ಹಾಗೂ ಪರಧರ್ಮ ಸಹಿಷ್ಣುತೆ ಕುರಿತು ಪ್ರಕಟವಾಗಿರುವಮೂರು ಪುಸ್ತಕಗಳುಅಭಿಯಾನದಲ್ಲಿ ಬಿಡುಗಡೆಯಾಗಲಿವೆ ಎಂದು ತಿಳಿಸಿದರು.
ವಿವಿಧ ಕಾರ್ಯಕ್ರಮ:ಸೆ.30ರಂದು ಸಂಜೆ 7ಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಅಭಿಯಾನದ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 1ರಂದು ವೃದ್ಧಾಶ್ರಮಕ್ಕೆ ಭೇಟಿ, ಅ.2ರಂದು ಜಿಲ್ಲಾ ಕಾರಾಗೃಹದಲ್ಲಿ ಕಾರ್ಯಕ್ರಮ, ಅ.6 ರಂದು ಯುವ ಜನರಿಗಾಗಿ ಕಾರ್ಯಕ್ರಮ, ಅ.7ರಂದು ಗ್ಯಾಂಗ್ಬಾವಡಿಯಲ್ಲಿ ಸಾರ್ವಜನಿಕ ಕಾರ್ಯಕ್ರಮ, ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಕರಪತ್ರಗಳು, ಪುಸ್ತಕಗಳ ಹಂಚಿಕೆ ಕಾರ್ಯಕ್ರಮಗಳು ಅಭಿಯಾನದಲ್ಲಿ ಇರಲಿದೆ ಎಂದರು.
ಅಭಿಯಾನದ ಸಂಚಾಲಕ ಎಂ.ಡಿ.ಬಳಗನೂರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
***
ಸೀರತ್ ಅಭಿಯಾನ ಇಸ್ಲಾಂ ಧರ್ಮದ ಪ್ರಚಾರವಲ್ಲ, ಬದಲಿಗೆ ಇಸ್ಲಾಂ ಧರ್ಮದ ಬಗ್ಗೆ ಜಗತ್ತಿನಲ್ಲಿ ಇರುವ ತಪ್ಪು ಅಭಿಪ್ರಾಯವನ್ನು ದೂರ ಮಾಡುವುದಾಗಿದೆ.
–ಮಹಮ್ಮದ್ ಯೂಸುಪ್ ಖಾಜಿ,ಅಧ್ಯಕ್ಷ, ಜಮಾಅತೆ ಇಸ್ಲಾಮಿ ಹಿಂದ್ ವಿಜಯಪುರ ಘಟಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.