
ಸಿಂದಗಿ: 1ರಿಂದ 8ನೆಯ ತರಗತಿಯವರೆಗೆ 186 ವಿದ್ಯಾರ್ಥಿನಿಯರು ಶಾಲೆಯಲ್ಲಿ ಓದುತ್ತಿದ್ದೇವೆ. ಆದರೆ ಮೂಲ ಸೌಕರ್ಯ ಹೊಂದಿದ ಒಂದು ಶೌಚಾಲಯ ಇಲ್ಲ. ಇದ್ದ ಒಂದು ಶೌಚಾಲಯದ ಬಾಗಿಲು ಮುರಿದಿದೆ. ಅಲ್ಲಿ ಬಟ್ಟೆಯಿಂದ ಮುಚ್ಚಲಾಗಿದೆ. ಶೌಚಾಲಯ ಕೋಣೆ ಒಳಗೆ ಬೆಳಕಿಲ್ಲ, ನೀರಿಲ್ಲ. ಇಂಥ ಕೆಟ್ಟ ಪರಿಸ್ಥಿತಿಯಲ್ಲಿರುವ ಶೌಚಾಲಯ ನಮಗೆ ಬೇಡ. ಹೈಟೆಕ್ ಶೌಚಾಲಯ ನಿರ್ಮಿಸಿಕೊಡಿ ಎಂದು 8ನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ನಿಖಿತಾ ಸಿದ್ಧಲಿಂಗಪ್ಪ ಬಿರಾದಾರ ಅಳಲು ತೊಡಿಕೊಂಡರು.
ತಾಲ್ಲೂಕಿನ ಬಂದಾಳದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಮತ್ತು ಸಂಗಮ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಅಪೂರ್ಣ ಸ್ಥಿತಿಯಲ್ಲಿರುವ ಶಾಲಾ ಕಾಂಪೌಂಡ್ ಪೂರ್ಣಗೊಳಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಬೇಕು, ಬಿಸಿಯೂಟ ಕೋಣೆ ವ್ಯವಸ್ಥೆ ತುರ್ತಾಗಿ ವ್ಯವಸ್ಥೆ ಆಗಬೇಕು ಎಂದು ವಿದ್ಯಾರ್ಥಿನಿ ಒತ್ತಾಯಿಸಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ, ಗ್ರಾಮ ಪಂಚಾಯಿತಿಯಿಂದ ಶಾಲಾ ಆವರಣದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿಯರ ಪ್ರತಿನಿಧಿಗಳಾದ ಸಮರ್ಥ ದೇವರಮನಿ, ಜ್ಯೋತಿ ಕಲ್ಲೊಳ್ಳಿ, ಶ್ರೇಯಾ ಯಳಮೇಲಿ, ನೀಲಕಂಠ ದೇವರಮನಿ, ಜಟ್ಟೆಪ್ಪ ದೇವೂರ, ವೈಷ್ಣವಿ ಬಡಿಗೇರ ಅವರು ಮನವಿಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ರೂಗಿ ಅವರಿಗೆ ಸಲ್ಲಿಸಿದರು.
ಶಾಲೆಯಲ್ಲಿನ ಅಪೂರ್ಣ ಕಾಮಗಾರಿಗಳನ್ನು ಮುಂದಿನ ವರ್ಷ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಲಾ ಮಕ್ಕಳಿಗೆ ಭರವಸೆ ನೀಡಿದರು.
ಸಂಗಮ ಸಂಸ್ಥೆ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು. ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿದರು. ವಿದ್ಯಾರ್ಥಿನಿಯರಾದ ಶೈಲಶ್ರೀ ಬಿರಾದಾರ, ಅಮೃತಾ ದೇವೂರ, ಗ್ರಾಮ ಪಂಚಾಯಿತಿ ಸದಸ್ಯರಾದ ಜಟ್ಟೆಪ್ಪ ಉಕ್ಕಲಿ, ಬಸವರಾಜ ಬೂದಿಹಾಳ ಮತ್ತು ಕಾರ್ಯದರ್ಶಿ ರಾಜೇಸಾಬ ಮುಜಾವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.