ವಿಜಯಪುರ: ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಮಹಾತ್ಮರ ಮೌಲ್ಯಗಳು ಹಾಗೂ ತತ್ವಾದರ್ಶಗಳನ್ನು ನವ ಪೀಳಿಗೆಗೆ ತಿಳಿಹೇಳುವ ಕಾರ್ಯ ಮಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಪಾಲಕರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಸಮಾಜದಲ್ಲಿಂದು ಮಕ್ಕಳನ್ನು ಆದರ್ಶರನ್ನಾಗಿ ಮಾಡಲು ಮಹಾತ್ಮರ ತತ್ವಾದರ್ಶಗಳು ಅತ್ಯಂತ ಸಹಕಾರಿಯಾಗಿದ್ದು, ಪಾಲಕರೆಲ್ಲರು ಇಂದಿನ ನವ ಪೀಳಿಗೆಗೆ ಎಲ್ಲ ಮಹನೀಯರ ಮೌಲ್ಯಗಳನ್ನು ತಿಳಿಹೇಳುವ ಶಿಕ್ಷಕರಂತಾಗಬೇಕು ಎಂದು ಮನವಿ ಮಾಡಿದರು.
ಮಹಾತ್ಮರ ಮೌಲ್ಯಾಧಾರಿತ ತತ್ವಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅಹಿಂಸೆ ಸೇರಿದಂತೆ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಪರಿಪಾಲಿಸಿದಾಗ ಮಾತ್ರ ಅವರ ಜಯಂತಿಗಳ ಆಚರಣೆಗೆ ಅರ್ಥಪೂರ್ಣತೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಾ ಶೆಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ವಿಜಯಪುರ ತಹಶೀಲ್ದಾರ್ ಮೋಹನ್ಕುಮಾರಿ, ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಬಿ.ಬಿ.ಪಾಟೀಲ, ಖಾದಿ ಗ್ರಾಮೋದ್ಯೋಗ ಅಧಿಕಾರಿ ದಳವಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆಶಾಪೂರ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮಂಜುಳಾ ಪ್ರಾರ್ಥಿಸಿದರು. ಸೇವಾದಳದ ಪ್ರತಿನಿಧಿಗಳು ಗಾಂಧಿ ಭಕ್ತಿ ಗೀತೆ, ಭಜನೆಗಳನ್ನು ಹಾಡಿದರು.
ನಗರದ ಗಾಂಧಿ ಚೌಕದಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಲಾರ್ಪಣೆ ಮಾಡಿ, ಗೌರವ ಅರ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.