ADVERTISEMENT

ವಿಜಯಪುರ: ಲಿಂಬೆಗೆ ಬೆಂಬಲ ಬೆಲೆಗೆ ಆಗ್ರಹ

ಜುಲೈ 14ರಂದು ಜಿಲ್ಲೆಗೆ ಬರುತ್ತಿರುವ ಮುಖ್ಯಮಂತ್ರಿಗಳ ಗಮನ ಸೆಳೆದ ರೈತ ಮುಖಂಡ ಪಂಚಪ್ಪ ಕಲಬುರ್ಗಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:56 IST
Last Updated 13 ಜುಲೈ 2025, 5:56 IST
ಪಂಚಪ್ಪ ಕಲಬುರ್ಗಿ
ಪಂಚಪ್ಪ ಕಲಬುರ್ಗಿ   

ವಿಜಯಪುರ: ‘ಪ್ರತಿ ವರ್ಷ ಜೂನ್‌ನಿಂದ ಡಿಸೆಂಬರ್‌ ವರೆಗೆ ಲಿಂಬೆ ಬೆಳೆಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗುವುದರಿಂದ ರಾಜ್ಯ ಸರ್ಕಾರವು ಲಿಂಬೆ ಅಭಿವೃದ್ಧಿ ಮಂಡಳಿ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಲಿಂಬೆ ಖರೀದಿಸುವ ಮೂಲಕ ರೈತರ ನೆರವಿಗೆ ಬರಬೇಕು’ ಎಂದು ರೈತ ಮುಖಂಡ ಪಂಚಪ್ಪ ಕಲಬುರ್ಗಿ ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜುಲೈ 14ರಂದು ‘ಲಿಂಬೆ ನಾಡು’ ಇಂಡಿಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇಂಡಿ ಲಿಂಬೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು’ ಎಂದು ಮನವಿ ಮಾಡಿದರು.

‘2017ರಲ್ಲಿ ಆರಂಭವಾದ ಲಿಂಬಿ ಅಭಿವೃದ್ಧಿ ಮಂಡಳಿಯಿಂದ ಲಿಂಬೆ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ಒಂದು ಲಿಂಬೆ ಹಣ್ಣು ಖರೀದಿ ಮಾಡಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಇಂಡಿಯಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಶ್ರಮ ಇದೆ. ಆದರೆ, ಮಂಡಳಿ ಸದ್ಯ ಅಸ್ತಿ ಪಂಜರದಂತಾಗಿದೆ. ಅದಕ್ಕೆ ಜೀವ ತುಂಬುವ ಕೆಲಸವನ್ನು ಸರ್ಕಾರದಿಂದ ಮಾಡಿಸಲು ಶಾಸಕರು ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

‘ಲಿಂಬೆ ಅಭಿವೃದ್ಧಿ ಮಂಡಳಿ ಮೂಲಕ ಲಿಂಬೆ ಹಣ್ಣುಗಳನ್ನು ದೇಶ, ವಿದೇಶದ ಮಾರುಕಟ್ಟೆಗೆ ರಫ್ತು ಮಾಡಲು ಯೋಜನೆ ರೂಪಿಸಬೇಕು. ಲಿಂಬೆ ಸಂಸ್ಕರಣೆಗೆ, ಲಿಂಬೆ ಕೃಷಿ ಕ್ಷೇತ್ರ ವಿಸ್ತರಿಸಲು ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

‘ಜನವರಿಯಿಂದ ಮೇ ಅಂತ್ಯದ ವರೆಗೆ ಲಿಂಬೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ಸಹಕಾರ ಅಗತ್ಯವಿಲ್ಲ. ಆದರೆ, ಜೂನ್‌ನಿಂದ ಡಿಸೆಂಬರ್‌ ವರೆಗೆ ಮಾರುಕಟ್ಟೆಯಲ್ಲಿ ಲಿಂಬೆಯನ್ನು ಕೇಳುವವರಿರುವುದಿಲ್ಲ. ಈ ಸಂದರ್ಭದಲ್ಲಿ ಒಂದು ಡಾಗ್‌ಗೆ ಕನಿಷ್ಠ ₹4 ಸಾವಿರ ಬೆಂಬಲ ಬೆಲೆ ನಿಗದಿಪಡಿಸಿ, ಮಂಡಳಿಯಿಂದಲೇ ಖರೀದಿಸಲು ಆದ್ಯತೆ ನೀಡಬೇಕು, ಈ ಎಲ್ಲ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ಮಂಡಳಿಗೆ ಸರ್ಕಾರವು ಕನಿಷ್ಠ ₹100 ಕೋಟಿ ಆವರ್ತ ನಿಧಿ ಮೀಸಲಿಡಬೇಕು’ ಎಂದು ಆಗ್ರಹಿಸಿದರು.  

‘ವಿಜಯಪುರ ಎಪಿಎಂಸಿಯಲ್ಲಿ ಮೂಲ ಸೌಲಭ್ಯಗಳಿಲ್ಲ, ಜಿಲ್ಲೆಯವರೇ ಆದ ಎಪಿಎಂಸಿ ಸಚಿವ ಶಿವಾನಂದ ಪಾಟೀಲರು ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಪಿಎಂಸಿಗಳಲ್ಲಿ ದಲ್ಲಾಳಿಗಳು ಪರೋಕ್ಷವಾಗಿ ಶೇ 10ರಷ್ಟು ಕಮಿಷನ್ ಮುರಿದುಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ರೈತರಾದ ಭೀಮಾಶಂಕರ ಹಂಜಗಿ, ಶ್ರೀಶೈಲ ಜುನಗೊಂಡ, ಖಾಜಾ ಪಿರಜಾದೆ, ಶ್ರೀಶೈಲ ಬಿರಾದಾರ, ಪ್ರಕಾಶ ಹೊಟಗಿ, ಶ್ರೀಶೈಲ ಪಾಟೀಲ ಇದ್ದರು.

ಲಿಂಬೆಗೆ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೆಳೆಗಾರರೊಂದಿಗೆ ಸೇರಿ ಸಂಘಟಿತ ಹೋರಾಟ ರೂಪಿಸಲಾಗುವುದು
– ಪಂಚಪ್ಪ ಕಲಬುರ್ಗಿ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.