ADVERTISEMENT

ತಿಕೋಟಾ | ಮಳೆ ಅಬ್ಬರ; ದ್ರಾಕ್ಷಿ ಬೆಳೆಗಾರ ಹೈರಾಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:36 IST
Last Updated 25 ಫೆಬ್ರುವರಿ 2026, 5:36 IST
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ಕಲ್ಲಪ್ಪ ಮಲ್ಲಪ್ಪ ಖವಿ ಅವರ ತೋಟದಲ್ಲಿ ದ್ರಾಕ್ಷಿ ಸಾಲಿನ ಕಂಬ ಬಿರುಗಾಳಿಗೆ ನೆಲಕ್ಕುರುಳಿದೆ
ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ಕಲ್ಲಪ್ಪ ಮಲ್ಲಪ್ಪ ಖವಿ ಅವರ ತೋಟದಲ್ಲಿ ದ್ರಾಕ್ಷಿ ಸಾಲಿನ ಕಂಬ ಬಿರುಗಾಳಿಗೆ ನೆಲಕ್ಕುರುಳಿದೆ   

ತಿಕೋಟಾ: ತಾಲ್ಲೂಕಿನ ಬಾಬಾನಗರ, ಕಳ್ಳಕವಟಗಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಬಿಜ್ಜರಗಿ, ಘೋಣಸಗಿ ಮೊದಲಾದ ಗ್ರಾಮಗಳಲ್ಲಿ ಮಂಗಳವಾರ ಮಳೆ ಸುರಿದ ಪರಿಣಾಮ ಕಟಾವು ಮಾಡಿ ರ‍್ಯಾಕ್‌ನಲ್ಲಿ ಹಾಕಿದ್ದ ದ್ರಾಕ್ಷಿ ತೊಯ್ದಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ದ್ರಾಕ್ಷಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಒಣದ್ರಾಕ್ಷಿ ಮಾಡಲು ದ್ರಾಕ್ಷಿಯನ್ನು ಕಟಾವು ಮಾಡಿ ರ‍್ಯಾಕ್‌ನಲ್ಲಿ ಹಾಕಲಾಗಿತ್ತು. ಮಳೆ, ಗಾಳಿ ಕಾರಣ ಒಣದ್ರಾಕ್ಷಿ ಘಟಕಕ್ಕೆ ಕೆಲವು ರೈತರು ತಾಡಪತ್ರಿ ಹೊದಿಕೆ ಹಾಕಿದ್ದಾರೆ. ತಾಡಪತ್ರಿ ಹಾಕದೇ ಇರುವೆಡೆ ದ್ರಾಕ್ಷಿ ತೊಯ್ದಿವೆ. ಇದರಿಂದ ಕಪ್ಪು ಬಣ್ಣಕ್ಕೆ ತಿರುಗಿದ್ದು, ಆದಾಯಕ್ಕೆ ಹೊಡೆತ ಬಿದ್ದಿದೆ ಎಂಬುದು ರೈತರ ಅಳಲು.

‘ಮಳೆಯಿಂದ ದ್ರಾಕ್ಷಿ ಹಾಳಾಗಿದ್ದು, ವಿಮೆ ಹಣ ತುಂಬಿದ ದ್ರಾಕ್ಷಿ ಬೆಳೆಗಾರರು 72 ಗಂಟೆಗಳಲ್ಲಿ ಸಂಬಂಧಿಸಿದ ವಿಮಾ ಕಂಪನಿಯವರು ಹಾಗೂ ಕಂದಾಯ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಸರ್ಕಾರಿ ಅಧಿಕಾರಿಗಳಿಗೆ ಶೀಘ್ರ ಮಾಹಿತಿ ಒದಗಿಸಬೇಕು’ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ತಿಳಿಸಿದ್ದಾರೆ.

ADVERTISEMENT

‘ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸೋಮವಾರದಿಂದ ಮಳೆ ಆಗುತ್ತಿದ್ದು, ಕಟಾವಿಗೆ ಬಂದ ದ್ರಾಕ್ಷಿ ಬೆಳೆ ಬಹುತೇಕ ಹಾನಿಯಾಗಿದೆ. ತಿಕೋಟಾ, ಚಡಚಣ, ಇಂಡಿ, ವಿಜಯಪುರ, ಸಾವಳಗಿ ಭಾಗದಲ್ಲಿ ಜೋರು ಮಳೆಯಾಗಿದೆ. ಈ ಭಾಗದ ರೈತರು ನಷ್ಟಕ್ಕೀಡಾಗುವ ಆತಂಕದಲ್ಲಿದ್ದಾರೆ’ ಎಂದು  ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಪ್ರಾದೇಶಿಕ ಕಚೇರಿಯ ಅಧ್ಯಕ್ಷ ಎಂ.ಎಸ್‌. ಲೋಣಿ ಹೇಳಿದರು.

‘ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ  ಜಿಲ್ಲಾಧಿಕಾರಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ‌ ನೀಡಿ, ಪರಿಶೀಲಿಸಬೇಕು. ಸಕಾಲಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿ, ರೈತರಿಗೆ ಪರಿಹಾರ ದೊರಕಿಸಿಕೊಡಬೇಕಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಗೊಂಡ‌ ರುದ್ರಗೌಡರ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.