ADVERTISEMENT

ಕಾಳಗಿ: ಅಣಿವೀರಭದ್ರೇಶ್ವರ ರಥೋತ್ಸವ ಇಂದು

ಕೋರವಾರ: ಶ್ರದ್ಧಾ, ಭಕ್ತಿಯಿಂದ ಅಗ್ನಿಕುಂಡ ಪೂಜೆ, ರುದ್ರಾಭಿಷೇಕ, ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 9:46 IST
Last Updated 24 ಫೆಬ್ರುವರಿ 2020, 9:46 IST
ಕಾಳಗಿ ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಅಗ್ನಿಕುಂಡದ ಪೂಜೆ ಜರುಗಿತು
ಕಾಳಗಿ ತಾಲ್ಲೂಕಿನ ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ಅಗ್ನಿಕುಂಡದ ಪೂಜೆ ಜರುಗಿತು   

ಕಾಳಗಿ: ಪ್ರತಿ ವರ್ಷ ಶಿವರಾತ್ರಿ ವೇಳೆಗೆ ಜರುಗುವ ಕೋರವಾರ ಸೀಮೆಯ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಶನಿವಾರ ಆರಂಭಗೊಂಡಿದ್ದು, ಸೋಮವಾರ ರಾತ್ರಿ 8 ಗಂಟೆಗೆ ರಥೋತ್ಸವ ನಡೆಯಲಿದೆ.

ಶನಿವಾರ ಗರ್ಭಗುಡಿಯ ದೇವರ ಮೂರ್ತಿಗೆ ಗಂಗಾಜಲದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾನುವಾರ ಬೆಳಿಗ್ಗೆ ಪ್ರಧಾನ ಅರ್ಚಕ ಧನಂಜಯ್ಯ ಕೋಣಸಿರಸಗಿ ವೈದಿಕತ್ವದಲ್ಲಿ ರುದ್ರಾಭಿಷೇಕ ಜರುಗಿತು. ಭಕ್ತ ಅಣ್ಣರಾವ ಪಾಟೀಲ ಮುಡಬೂಳ ಮತ್ತು ಮಲ್ಲಿಕಾರ್ಜುನ ತೊನಸಳ್ಳಿ ಸೇರಿದಂತೆ ಅನೇಕ ದಂಪತಿಗಳ ಉಪಸ್ಥಿತಿಯಲ್ಲಿ ಸಂಜೆ ಅಗ್ನಿಕುಂಡದ ಪೂಜೆ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ರಾತ್ರಿಯಾಗುತ್ತಿದ್ದಂತೆ ಅಗ್ನಿಕುಂಡಕ್ಕೆ ತುಪ್ಪ ಸುರಿದು ಅಗ್ನಿ ಸ್ಪರ್ಶ ಮಾಡಲಾಯಿತು.

ಸೋಮವಾರ ಬೆಳಗಿನ ಜಾವ ಜರುಗುವ ಅಗ್ನಿ ಪ್ರವೇಶಕ್ಕಾಗಿ ಸೊಲ್ಲಾಪುರ, ಅಕ್ಕಲಕೋಟ, ಜಮಖಂಡಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆಗಳಿಂದ ಅಪಾರ ಭಕ್ತರು ಆಗಮಿಸಿದ್ದಾರೆ.

ADVERTISEMENT

ಅಗ್ನಿಕುಂಡದ ಪೂಜೆ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ, ಕಾಳಗಿ ತಹಶೀಲ್ದಾರ್ ನೀಲಪ್ರಭಾ ಬಬಲಾದ, ಚಿತ್ತಾಪುರ ತಹಶೀಲ್ದಾರ್ ಉಮಾಕಾಂತ ಹಳ್ಳೆ, ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಕಂದಾಯ ನಿರೀಕ್ಷಕ ಕರಬಸಪ್ಪ ಬೆನಕನಳ್ಳಿ, ಕಾರ್ಯದರ್ಶಿ ರವೀಂದ್ರ ಮುತ್ತಗಿ, ಸಹ ಕಾರ್ಯದರ್ಶಿ ಅಣಿವೀರಯ್ಯ ಸಾಲಿ, ಮುಖಂಡ ಶಿವನಾಗಯ್ಯ ಮಠಪತಿ, ಅಣ್ಣರಾವ ಕಂಠಿ, ಸೋಮಯ್ಯ ಕಂಠಿ, ಮಲ್ಲಿಕಾರ್ಜುನ ಸೂರವಾರ, ಬಸವರಾಜ ಪೂಜಾರಿ, ಶಿವಕುಮಾರ ಕಲಶೆಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು , ಮುಖಂಡರು ಇದ್ದರು.

ರಥೋತ್ಸವ ಇಂದು: ಸೋಮವಾರ ಮಧ್ಯಾಹ್ನ ಕೋರವಾರ ಗ್ರಾಮದ ಬಸಲಿಂಗ ಮನೆಯಿಂದ ಆರಂಭಗೊಳ್ಳುವ ಕುಂಭ, ಕಳಶ, ಪುರಾವಂತರ ಮೆರವಣಿಗೆಯು 2 ಕಿ.ಮೀ ಕ್ರಮಿಸಿ ದೇವಸ್ಥಾನಕ್ಕೆ ಸಂಜೆ ತಲುಪುವುದು.

ಪುರವಂತರ ಕುಣಿತದ ಬಳಿಕ ರಥಕ್ಕೆ ಪೂಜೆ ಜರುಗಿ ರಾತ್ರಿ 8 ಗಂಟೆಗೆ ರಥೋತ್ಸವ ಅದ್ಧೂರಿಯಾಗಿ ನೆರವೇರುವುದು. ತದ ನಂತರ ಮದ್ದು ಸುಡುವುದು, ಭಜನೆ, ಕೀರ್ತನೆ ಮೊದಲಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.