
ವಿಜಯಪುರ: ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸದಸ್ಯರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ಸದಸ್ಯ, ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಸುತ್ತಿರುವವರು ಸಚಿವ ಶಿವಾನಂದ ಪಾಟೀಲ ಕೂರಿಸಿದ ಗಿರಾಕಿಗಳು, ಪ್ರತಿದಿನ ಸಂಜೆಯಾಗುತ್ತಲೇ ಅವರ ಮನೆಗೆ ಹೋಗಿ ಪಗಾರ ಎಣಸಿಕೊಳ್ಳುತ್ತಾರೆ, ಹೋರಾಟ ನಾಟಕೀಯ’ ಎಂದು ಶಾಸಕ ಯತ್ನಾಳ ಹೇಳುತ್ತಿರುವುದು ಖಂಡನೀಯ ಎಂದರು.
‘ಹೋರಾಟ ಮಾಡುವುದು ನಮ್ಮ ಹಕ್ಕು. ಇಲ್ಲಿ ಯಾರು ನಮ್ಮನ್ನು ಕರೆದುಕೊಂಡು ಬಂದು ಕೂರಿಸಿಲ್ಲ. ನಾವೆಲ್ಲ ಪ್ರತಿ ದಿನ ಬೇರೆ ಬೇರೆ ಹಳ್ಳಿ ಮತ್ತು ಪಟ್ಟಣಗಳಿಂದ ಸ್ವಂತ ಹಣ ಖರ್ಚುಮಾಡಿಕೊಂಡು ಬಂದು ಹೋರಾಟ ನಡೆಸುತ್ತಿದ್ದೇವೆ. ಸ್ವಇಚ್ಚೆಯಿಂದ ಹೋರಾಟವನ್ನು ಪ್ರಾರಂಭಿಸಿದ್ದೇವೆ, ಇಲ್ಲಿ ನಾವೆಲ್ಲರೂ ಜಿಲ್ಲೆಯ ಹಿತಾಸಕ್ತಿಗಾಗಿ ಹೋರಾಟಕ್ಕೆ ಇಳಿದಿದ್ದೇವೆ. ಯತ್ನಾಳ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಹೋರಾಟ ಸಮಿತಿ ಸದಸ್ಯರಾದ ಅನಿಲ ಹೊಸಮನಿ, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶಾಳಕರ, ಸುರೇಶ ಬಿಜಾಪುರ, ಸಿದ್ರಾಮ ಹಳ್ಳೂರ, ಎಸ್. ಎಂ.ಗುರಿಕಾರ, ಶ್ರೀಕಾಂತ ಕೊಂಡಗೂಳಿ, ಭರತಕುಮಾರ ಎಚ್. ಟಿ, ಜಗದೇವ ಸೂರ್ಯವಂಶಿ, ಸಿ.ಬಿ. ಪಾಟೀಲ, ಸುಶೀಲ ಮಿಣಜಗಿ, ಜ್ಯೋತಿ ಮಿಣಜಗಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್, ಶಿವರಂಜನಿ, ಕಾವೇರಿ ರಜಪೂತ, ನೀಲಾಂಬಿಕಾ ಬಿರಾದಾರ, ಬಾಳು ಜೇವೂರ, ಸಲೀಂ ಹೊಕ್ರಾಣಿ ಇದ್ದರು.
ಹೋರಾಟಗಾರರನ್ನು ಅವಮಾನಿಸಿದ ಶಾಸಕ ಯತ್ನಾಳಗೆ ದಿಕ್ಕಾರ ಈ ಕೂಡಲೇ ಹೇಳಿಕೆಯನ್ನು ವಾಪಾಸ್ಸು ತೆಗೆದುಕೊಂಡು ಜಿಲ್ಲೆಯ ಹೋರಾಟಗಾರರ ಕ್ಷಮೆಯಾಚಿಸಬೇಕು–ಅರವಿಂದ ಕುಲಕರ್ಣಿ ರೈತ ಮುಖಂಡ
ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು, ಉದ್ದೇಶಿತ ಪಿಪಿಪಿ ಮಾದರಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ಇದೆ. ಈ ಸಂಬಂಧ ಜಿಲ್ಲಾ ಕಾಂಗ್ರೆಸ್ ಸಮಿತಿ ನಿಯೋಗಯುವ ಡಿ.10ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾಲೇಜು ಸ್ಥಾಪನೆ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೋರಾಟಗಾರರ ನಿಯೋಗವನ್ನು ಬೆಂಗಳೂರಿಗೆ ಕರೆದೊಯ್ದು ಸಿಎಂ ಭೇಟಿ ಮಾಡಿಸಿದ್ದಾರೆ. ಸರ್ಕಾರವೂ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಿದೆ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಸಚಿವ ಎಂ.ಬಿ.ಪಾಟೀಲ ನಡುವೆ ಹೊಂದಾಣಿಕೆ ಇದೆ ಎಂಬ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ರಾಜಕೀಯ ಪ್ರೇರಿತ ಆರೋಪ ಸಂಪೂರ್ಣ ಸುಳ್ಳು. ಸಚಿವರ ವಿರುದ್ಧ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ಮುಖಂಡರಾದ ಹಮೀದ್ ಮುಶ್ರೀಫ್, ಹೊನಮಲ್ಲ ಸಾರವಾಡ, ಎಸ್.ಎಂ.ಪಾಟೀಲ ಗಣಿಹಾರ, ಗಂಗಾಧರ ಸಂಬಣ್ಣಿ, ಸೋಮನಾಥ ಕಳ್ಳಿಮನಿ, ಆರತಿ ಶಹಪುರ, ಚಾಂದ್ಸಾಬ್ ಗಡಗಲಾವ್, ಅಶ್ಪಾಕ್ ಮನಗೂಳಿ, ಜಮೀರ್ ಅಹಮ್ಮದ್ ಭಕ್ಷಿ, ವೈಜನಾಥ ಕರ್ಪೂರಮಠ, ಶಕೀಲ್ ಬಾಗ್ಮಾರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.