ADVERTISEMENT

ವಿಜಯಪುರ | ಬೈಕ್‌ ಡಿಕ್ಕಿ: ಎಎಸ್‌ಪಿ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 4 ಮೇ 2020, 12:07 IST
Last Updated 4 ಮೇ 2020, 12:07 IST

ವಿಜಯಪುರ: ಕರ್ತವ್ಯ ನಿರತ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಎಸ್‌ಪಿ) ಡಾ.ರಾಮ ಎಲ್‌.ಅರಸಿದ್ದಿ ಅವರಿಗೆ ಸೋಮವಾರ ಬೆಳಿಗ್ಗೆ ಬೈಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ.

ನಗರದ ಗೋಳಗುಮ್ಮಟ ಠಾಣೆ ವ್ಯಾಪ್ತಿಯ ಕೋವಿಡ್‌19ಗೆ ಸಂಬಂಧಿಸಿದ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪರಿಶೀಲನೆಗಾಗಿ ಅರಸಿದ್ದಿ ಅವರು ತೆರಳಿದ್ದಾಗ ಕಾಮತ್‌ ಹೋಟೆಲ್‌ ಬಳಿ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಅಸ್ತವ್ಯಸ್ತವಾಗಿರುವುನ್ನು ಗಮನಿಸಿ, ಸರಿಯಾಗಿ ಜೋಡಣೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಬಸವೇಶ್ವರ ಸರ್ಕಲ್‌ ಕಡೆಯಿಂದ ವೇಗವಾಗಿ ಬಂದ ಬೈಕ್‌ (ಕೆಎ48 ಇ6536) ಸವಾರನೊಬ್ಬ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತೊಡೆ ಭಾಗ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅವರ ಜೊತೆ ಇದ್ದ ಸಿಬ್ಬಂದಿ ರಾಘವೇಂದ್ರ ಜಾಧವ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ADVERTISEMENT

ಆರೋಪಿ ವಿರುದ್ಧ ಇಲ್ಲಿನ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಎಲ್‌ಡಿಇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.