
ಬಿ.ಎಂ. ಬಿರಾದಾರ
ವಿಜಯಪುರ: ಪಿಪಿಪಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜನ್ನು ವಿಜಯಪುರದಲ್ಲಿ ಸ್ಥಾಪಿಸಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಮುಖಂಡ, ಪಂಚಮಸಾಲಿ ಸಮಾಜದ ಮುಖಂಡರಾದ ಡಾ.ಬಿ.ಎಂ.ಬಿರಾದಾರ ತಿಳಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ವಿಜಯಪುರದಲ್ಲಿ ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟವನ್ನು ಮನ್ನಿಸಿ, ಜಿಲ್ಲೆಯ ಜನತೆಯ ಆಶಯದಂತೆ ಸಚಿವರು ನಿರ್ಧಾರ ಪ್ರಕಟಿಸಿರುವುದು ಅಭಿನಂದನೀಯ ಎಂದರು.
ವಿಜಯಪುರದಲ್ಲಿ ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿದ್ದು, ಇದೀಗ ಸರ್ಕಾರಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯಾಗುವುದರಿಂದ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ಆದಷ್ಟು ಶೀಘ್ರ ಸಚಿವರು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳ್ಳಬೇಕು. ಇದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೂ ಅನುಕೂಲವಾಗಲಿದೆ ಎಂದರು.
ಮೂರ್ತಿ ಅನಾವರಣ: ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ವೀರ ರಾಣಿ ಕಿತ್ತೂರು ಚನ್ನಮ್ಮಳ ಮೂರ್ತಿಯನ್ನು ಜನವರಿ 9ರಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲೆಯ ಸಚಿವರು ಉದ್ಘಾಟನೆ ಮಾಡುತ್ತಿರುವುದು ಜಿಲ್ಲೆಯ ಜನತೆಯ ಹಾಗೂ ಸಮಾಜದ ಬಹುದಿನಗಳ ಆಶಯ ಈಡೇರಿದಂತಾಗಲಿದೆ ಎಂದು ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.