ADVERTISEMENT

ಅಡ್ಡಮತ: ಜಿ.ಪಂ.ಮೂವರು ಕಾಂಗ್ರೆಸ್‌ ಸದಸ್ಯರ ಉಚ್ಛಾಟನೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 9:09 IST
Last Updated 1 ಜುಲೈ 2020, 9:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಮೂವರನ್ನು ಉಚ್ಛಾಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಮೇಶ ಕೋಳ್ಕೂರ, ಶಿವಶರಣ ಬೈರಗೊಂಡ ಮತ್ತು ಶಿವಯೋಗಪ್ಪ ನೇದಲಗಿ ಅವರಿಗೆ ಪಕ್ಷ ಎಲ್ಲ ರೀತಿಯ ಹುದ್ದೆ, ಅಧಿಕಾರ ನೀಡಲಾಗಿತ್ತು. ಎಲ್ಲವನ್ನು ಅನುಭವಿಸಿ ಇದೀಗ ದುರಾಸೆಗೆ ಬಲಿಬಿದ್ದು, ಕೆಟ್ಟ ತೀರ್ಮಾನ ಕೈಗೊಂಡಿದ್ದು, ಅವರ ವಿರುದ್ಧ ಕ್ರಮ ನಿಶ್ಚಿತ ಎಂದರು.

‘ಪ್ರತಿಜ್ಞಾ ವಿಧಿ’ ಸ್ವೀಕಾರ ಸಮಾರಂಭ ನಾಳೆ

ADVERTISEMENT

ಕೆಪಿಸಿಸಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ‘ಪ್ರತಿಜ್ಞಾ ವಿಧಿ’ ಸ್ವೀಕಾರ ಸಮಾರಂಭ ಜುಲೈ 2ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದ್ದು, ಇದರ ವೀಕ್ಷಣೆಗೆ ಜಿಲ್ಲೆಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ ತಿಳಿಸಿದರು.

ವಿಜಯಪುರ ನಗರದ 35 ವಾರ್ಡ್‌ಗಳಲ್ಲಿ ಹಾಗೂ ಚಡಚಣ, ತಾಳಿಕೋಟೆ ಮತ್ತು ದೇವರಹಿಪ್ಪರಗಿ ಪಟ್ಟಣ ಪಂಚಾಯ್ತಿಯ ಎಲ್ಲ ವಾರ್ಡ್‌ಗಳಲ್ಲಿ ಜ್ಯೂಮ್‌ ಆ್ಯಪ್‌ ಮೂಲಕ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲೆಯ 275 ಗ್ರಾಮಗಳಲ್ಲೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಪ್ರತಿ ಕಾರ್ಯಕ್ರಮದಲ್ಲೂ 50ರಿಂದ 100 ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪರಸ್ಪರ ಅಂತರ ಕಾಯ್ದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ವಿಠಲ ಕಟಕದೊಂಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್‌ ಸನದಿ, ಕಾಂಗ್ರೆಸ್‌ ಮುಖಂಡರಾದ ಅಬ್ದುಲ್‌ ಹಮೀದ್‌ ಮುಷಿರಿಫ್‌, ಮಮ್ಮದ್‌ ರಫೀಕ್‌ ಟಪಾಲ, ಸುರೇಶ ಗೋಣಸಗಿ, ವಸಂತ ಹೊನಮೊಡೆ, ಜಮೀರ್‌ ಬಕ್ಷಿ, ಮುದಕಪ್ಪ ಶಾಂತಗೇರಿ, ಚಾಂದಸಾಬ್ ಗಡಗಲಾವ್‌, ಎಂ.ಎಂ.ಚಲವಾದಿ, ಅಶೋಕ ರಾಠೋಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.