ADVERTISEMENT

ವಿಜಯಪುರ:ಟೆಂಟ್ ತೆರವುಗೊಳಿಸಿದ ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಹೋರಾಟಗಾರರು ಜೈಲಿಗೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 12:47 IST
Last Updated 2 ಜನವರಿ 2026, 12:47 IST
   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಾಗೂ ಪಿಪಿಪಿ ವಿರೋಧಿಸಿ ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ 107 ದಿನಗಳಿಂದ ಅನಿರ್ದಿಷ್ಟಾವಧಿ, ಆಹೋರಾತ್ರಿ ನಡೆಸುತ್ತಿದ್ದ ಹೋರಾಟಗಾರ ಟೆಂಟ್‌ ಅನ್ನು ಗುರುವಾರ ತಡರಾತ್ರಿ ಪೊಲೀಸರು ತೆರವುಗೊಳಿಸಿ, ಸ್ಥಳದಲ್ಲಿ ಹೋರಾಟಗಾರರು ಪ್ರವೇಶಿಸದಂತೆ ತಡೆಯೊಡ್ಡಿದ್ದಾರೆ.

ಇನ್ನೊಂದೆಡೆ ಸಚಿವ ಎಂ.ಬಿ.ಪಾಟೀಲರ ಮನೆಗೆ ಗುರುವಾರ ಮುತ್ತಿಗೆ ಹಾಕಲು ಯತ್ನಿಸಿದಾಗ ತಡೆಯೊಡ್ಡಿ ವಶಕ್ಕೆ ಪಡೆದಿದ್ದ 27 ಹೋರಾಟಗಾರರ ಪೈಕಿ, 21 ಜನರನ್ನು ಗುರುವಾರ ರಾತ್ರಿ ಬಿಡುಗಡೆ ಮಾಡಿದ್ದಾರೆ. 

ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಆರೋಪದ ಮೇರೆಗೆ ಹುಣಶ್ಯಾಳ ಪಿ.ಬಿ.ಸಂಗನಬಸವ ಸ್ವಾಮೀಜಿ ಸೇರಿದಂತೆ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಅನಿಲ ಹೊಸಮನಿ, ಭಗವಾನ್‌ ರೆಡ್ಡಿ, ಭೋಗೇಶ ಸೋಲಾಪುರ, ಸಿದ್ರಾಮ ಹಳ್ಳೂರ ಅವರ ವಿರುದ್ಧ ಕೊಲೆ ಯತ್ನ, ಜೀವ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಕೇಸನ್ನು ದಾಖಲಿಸಿ, ವಿಜಯಪುರ ದರ್ಗಾ ಜೈಲಿಗೆ ಕಳುಹಿಸಿದ್ದಾರೆ.

ADVERTISEMENT

ಬಂಧಿತರ ಬಿಡುಗಡೆಗೆ ಹೋರಾಟಗಾರರು ಕೋರ್ಟ್‌ ಮೊರೆ ಹೋಗಿದ್ದಾರೆ. ಅಲ್ಲದೇ, ಜಿಲ್ಲೆಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಹೋರಾಟಗಾರರ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮಕ್ಕೆ ಬಿಜೆಪಿ, ಕಾಂಗ್ರೆಸ್‌, ಎಎಪಿ, ಸಿಪಿಎಂ, ಸಿಪಿಐ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ. ಜೊತೆಗೆ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದವು.

ನ್ಯಾಯಸಮ್ಮತವಲ್ಲ:

‘ಹುಣಶ್ಯಾಳದ ಸಂಗನಬಸವ ಸ್ವಾಮೀಜಿ ಹಾಗೂ ಹೋರಾಟಗಾರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವುದು ನ್ಯಾಯಸಮ್ಮತವಲ್ಲ. ಪ್ರತಿಭಟನೆ ಜನರ ಮೂಲಭೂತ ಹಕ್ಕು. ಪ್ರತಿಭಟನಾಕಾರ ವಿರುದ್ಧ ಪೊಲೀಸರು ತೀವ್ರ ಕ್ರಮಕ್ಕೆ ಮುಂದಾಗಿರುವುದು ಖಂಡನಾರ್ಹ’ ಎಂದು ವಿಧಾನ ಪರಿಷತ್‌ ಬಿಜೆಪಿ ಸದಸ್ಯ ಕೇಶವ ಪ್ರಸಾದ್‌ ಹೇಳಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಮ್ಮ ಹಠ ಬಿಟ್ಟು ಪ್ರತಿಭಟನಾಕಾರರ ಜೊತೆ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಾಡುವ ಆಶ್ವಾಸನೆಯನ್ನು ಪುನರುಚ್ಚರಿಸಿ, ಪರಿಸ್ಥಿತಿ ಶಾಂತಗೊಳಿಸಲಿ’ ಎಂದು  ಆಗ್ರಹಿಸಿದ್ದಾರೆ.

ಬಂದ್‌ಗೆ ಕರೆ:

‘ಜೈಲಿಗೆ ಕಳಿಸಲಾಗಿರುವ ಸಂಗನಬಸವ ಸ್ವಾಮೀಜಿ ಮತ್ತು ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು, ಇಲ್ಲವಾದರೆ ವಿಜಯಪುರ ಬಂದ್‌ಗೆ ಕರೆ ನೀಡಲಾಗುವುದು’ ಎಂದು ಬಿಜೆಪಿ ವಿಜಯ‍ಪುರ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದ್ದಾರೆ.

ನಿರಾಪರಾಧಿಗಳ ಬಿಡುಗಡೆ ಮಾಡಿ:

‘ಸ್ವಾಮೀಜಿಯವರು ಪಿಎಸ್‌ಐಗೆ ಕಪಾಳಮೋಕ್ಷ ಮಾಡಿರುವುದು ಸರಿಯಲ್ಲ. ಸ್ವಾಮೀಜಿ ಅವರನ್ನು ಹೊರತು ಪಡಿಸಿ, ಬಂಧಿತ ಇನ್ನುಳಿದ ನಿರಾಪರಾಧಿ ಹೋರಾಟಗಾರರನ್ನು ತಕ್ಷಣ ಬಿಡಬೇಕು, ದೂರು ಹಿಂಪಡೆಯಬೇಕು' ಎಂದು ಕಾಂಗ್ರೆಸ್‌ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಆಗ್ರಹಿಸಿದ್ದಾರೆ.

‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲರನ್ನು ಗುರಿಯಾಗಿಸಿ ಬಿಜೆಪಿ ಹುನ್ನಾರ ನಡೆಸಿದೆ. ಸಚಿವರನ್ನು ತಪ್ಪು ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. 

‘ಹೋರಾಟಗಾರರ ಟೆಂಟ್‌ ಅನ್ನು ಪೊಲೀಸರು ಕಿತ್ತಿಸಿರುವುದು ಖಂಡನೀಯ. ಜನಪರ ಹೋರಾಟ ಹತ್ತಿಕ್ಕಬಾರದು, ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ಜಿಲ್ಲೆಗೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.