ವಿಜಯಪುರ: ವಿಜಯಪುರ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ. 5ನೇ ವಾರ್ಡ್ನ ಬಿಜೆಪಿ ಸದಸ್ಯ ಎಂ.ಎಸ್.ಕರಡಿ ಅವರು ಮೇಯರ್ ಮತ್ತು 17 ವಾರ್ಡ್ನ ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯೆ ಸುಮಿತ್ರಾ ಜಾಧವ ಉಪಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಇಬ್ಬರೂ ತಲಾ 24 ಮತ ಗಳಿಸಿದರು. ಮೇಯರ್ ಸ್ಥಾನಕ್ಕೆ ಜನವರಿಯಲ್ಲಿಉಪಮೇಯರ್ ಸ್ಥಾನಕ್ಕೆ ಇದೇ ಫೆಬ್ರುವರಿಯಲ್ಲಿ ಚುನಾವಣೆ ನಡೆದಿತ್ತು. ಕೋರ್ಟ್ ಆದೇಶದ ಮೇರೆಗೆ ಸೋಮವಾರ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಫಲಿತಾಂಶ ಪ್ರಕಟಿಸಿದರು.
ಆಸ್ತಿ ವಿವರ ಸಲ್ಲಿಸದ ಕಾರಣ ಬಿಜೆಪಿಯ 18, ಕಾಂಗ್ರೆಸ್ನ 10, ಎಐಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರ 5 ಸದಸ್ಯರು ಸೇರಿ ಎಲ್ಲ 35 ಸದಸ್ಯರನ್ನು ರಾಜ್ಯ ಸರ್ಕಾರ ಅನರ್ಹಗೊಳಿಸಿ ಫೆಬ್ರುವರಿಯಲ್ಲಿ ಆದೇಶ ಹೊರಡಿಸಿತ್ತು. ಆಗ ನಡೆದಿದ್ದ ಚುನಾವಣೆ ಫಲಿತಾಂಶ ತಡೆ ಹಿಡಿಯಲಾಗಿತ್ತು.
ನೂತನ ಮೇಯರ್, ಉಪ ಮೇಯರ್ ಇಬ್ಬರೂ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಟ್ಟಾ ಬೆಂಬಲಿಗರು. ಸೋಮವಾರ ಯತ್ನಾಳ ಅವರೊಂದಿಗೆ ಪಾಲಿಕೆಗೆ ಬಂದು, ಅಧಿಕಾರ ಸ್ವೀಕರಿಸಿದರು. ಬಳಿಕ ಯತ್ನಾಳ ಅವರೊಂದಿಗೆ ವಿಜಯೋತ್ಸವ ಆಚರಿಸಿದರು.
‘ಪಾಲಿಕೆಯಲ್ಲಿ ಬಿಜೆಪಿ–ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣಕ್ಕೆ ತಡೆ ಬಿದ್ದಿದೆ. ಮೊದಲ ಬಾರಿಗೆ ಹಿಂದುತ್ವಕ್ಕೆ ಜಯ ಒಲಿದಿದೆ’ ಎಂದು ಶಾಸಕ ಯತ್ನಾಳ ಇದೇ ವೇಳೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.